ಈ ವೆಬ್ ಸೈಟ್ ಆರಂಭಿಸಿದ ಉದ್ದೇಶದ ಕುರಿತಾಗಿ ಸ್ವಲ್ಪ ಮಾಹಿತಿ ಮತ್ತು ಜನಾರ್ಧನ ರೆಡ್ಡಿಯ ಸ್ವಪರಿಚಯವಿರುತ್ತದೆ. ಶ್ರೀ ಗಾಲಿ ಜನಾರ್ಧನ ರೆಡ್ಡಿಯವರ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಅನೇಕ ವಿಷಯಗಳನ್ನು ಶ್ರೀ ಸಾಮಾನ್ಯರಿಗೆ ತಿಳಿಸಲು ಹಾಗೂ ಮುಕ್ತವಾಗಿ ಜನಸಂಪರ್ಕ ಹೊಂದಲು ಈ ಅಂತರ್ಜಾಲ ತಾಣ ಬಳಕೆಯಾಗುತ್ತದೆ.
ಜನಸೇವೆಯೇ ನನ್ನ ಮೊದಲ ಆದ್ಯತೆಯಾದ್ದರಿಂದ ಜನರೊಡನೆ ನಿರಂತರ ಸಂಪರ್ಕ ಹೊಂದುವುದಕ್ಕೆ ಸದಾ ಬಯಸುತ್ತೇನೆ. ನಿಮ್ಮೆಲ್ಲರಿಗೂ ತಿಳಿದಂತೆ ಪ್ರಸ್ತುತ ಭಾರತದಲ್ಲಿ ಡಿಜಿಟಲ್ ಕ್ರಾಂತಿ ಶುರುವಾಗಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಕಿಚ್ಚು ಹಚ್ಚುವುದರಿಂದ ಆರಂಭವಾಗಿ ಜನರ ಕಷ್ಟ ಸುಖಗಳನ್ನ, ಸಮಾಜದ ಅಂಕು-ಡೊAಕುಗಳನ್ನ ತಿದ್ದುವಲ್ಲಿ ಪತ್ರಿಕೆಗಳು ಮಹತ್ತರ ಕೆಲಸ ಮಾಡಿದ್ದೆವು. ನಂತರದ ದಿನಗಳಲ್ಲಿ ಟಿವಿ ವಾಹಿನಿಗಳಿಂದ ಆ ಬದಲಾವಣೆಗೆ ಮತ್ತಷ್ಟು ವೇಗ ದೊರಕಿತು. ಈಗ ಕಾಲ ಬದಲಾಗಿದೆ. ಮೊಬೈಲ್ ಪ್ರಪಂಚವನ್ನು ಚಿಕ್ಕದಾಗಿಸಿದೆ. ಪ್ರಪಂಚ ಶ್ರೀಸಾಮಾನ್ಯರ ಬೆರಳ ತುದಿಯಲ್ಲಿದೆ. ಫೇಸ್ಬುಕ್ , ಟ್ವಿಟ್ಟರ್, ಇನ್ಸ್ಟಾಗ್ರಾಂ ಸೇರಿದಂತೆ ಹತ್ತು ಹಲವು ಜಾಲತಾಣಗಳು ಪ್ರಪಂಚದ ಆಗು-ಹೋಗುಗಳನ್ನು ಕ್ಷಣ ಕ್ಷಣಕ್ಕೂ ಜನರಿಗೆ ತಲುಪಿಸುತ್ತದೆ. ಕಾಲಕ್ಕೆ ನಾವು ಬದಲಾಗಬೇಕಿದೆ. ನನ್ನ ಜನರೊಡನೆ, ನನ್ನೆಲ್ಲಾ ಆತ್ಮೀಯರೊಡನೆ ನಿರಂತರ ಸಂಪರ್ಕ ಹೊಂದಲು ನನ್ನ ಈ ವೆಬ್ಸೈಟ್ ವೇದಿಕೆಯಾಗಿದೆ. ನನ್ನ ವಿಷಯದಲ್ಲಿ ಹೇಳುವುದಾದರೆ ಅನೇಕ ಬಾರಿ ಊಹಾ-ಪೋಹಗಳು, ಕಪೋಲ ಕಲ್ಪಿತ ವರದಿಗಳೇ ಮಾಧ್ಯಮಗಳಲ್ಲಿ ಹೆಚ್ಚು ಬಿತ್ತರವಾಗಿದೆ. ಸತ್ಯ ಶೋಧಿಸುವ ಕೆಲಸ ಯಾರೊಬ್ಬರಿಂದಲೂ ಆಗಿಲ್ಲವೆಂದೇ ಹೇಳಬಹುದು. ಈ ವೆಬ್ಸೈಟ್ ನೇರ ಮತ್ತು ನಿಖರ ವಿಷಯಗಳನ್ನು ತಿಳಿಸುವುದರೊಂದಿಗೆ ಸತ್ಯದ ಮೇಲೆ ಬೆಳಕು ಚೆಲ್ಲಲಿದೆ. ನಿಮ್ಮ ಎಲ್ಲಾ ಗೊಂದಲಗಳಿಗೆ ನಾನೇ ನೇರವಾಗಿ ಉತ್ತರಿಸಲಿದ್ದೇನೆ. ನೇರ ಸಂವಹನಕ್ಕೆ ಸಮರ್ಥ ಸಂಪರ್ಕ ಸಾಧನ ಈ ವೆಬ್ಸೈಟ್.
ನನ್ನೂರು ಬಳ್ಳಾರಿ. ಈಗ ಬಳ್ಳಾರಿ ಸಾಕಷ್ಟು ಅಭಿವೃದ್ಧಿಯಾಗಿದೆ. ಸಂಪೂರ್ಣವಾಗಿ ನಗರಪ್ರದೇಶವಾಗಿದೆ. ಆದರೆ ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಾಗ ಬಳ್ಳಾರಿಯ ದುರ್ಗಮ್ಮ ಸಿಡಿಬಂಡೆ ಜಾತ್ರೆ ಹಾಗೂ ಕೋಟೆ ಮಲ್ಲೇಶ್ವರ ರಥೋತ್ಸವ ನೆನಪಾಗುತ್ತದೆ. ಅಲ್ಲದೇ ಬಳ್ಳಾರಿಯ ರಥಬೀದಿಯ ವೈಭವ ಕಣ್ಮುಂದೆ ಮರುಕಳಿಸುತ್ತದೆ. ಚಿಕ್ಕಂದಿನಲ್ಲಿ ನಾವು ಪ್ರತಿವರ್ಷ ಜಾತ್ರೆ ನಡೆಯುತ್ತಿದ್ದ ಆ ಎರಡು ದಿನಗಳನ್ನು ಎದುರು ನೋಡುತ್ತಿದ್ದೆವು. ನಮ್ಮ ತಂದೆ ತಾಯಿಗೆ ನಾವು ನಾಲ್ವರು ಮಕ್ಕಳು. ನಮ್ಮೆಲ್ಲರನ್ನು ಅಪ್ಪ ಜಾತ್ರೆಗೆ ಕರೆದೊಯ್ಯುತ್ತಿದ್ದರು. ಅಪ್ಪ ಕೊಡಿಸುತ್ತಿದ್ದ ಆಟದ ಸಾಮಾನುಗಳು ನೀಡುತ್ತಿದ್ದ ಖುಷಿಯೇ ಬೇರೆ. ಅಲ್ಲಿ ಒಟ್ಟಾಗಿ ಕುಳಿತು ಬಿಸಿ ಬಿಸಿ ಮಿರ್ಚಿ ಮಂಡಕ್ಕಿ ತಿಂದ ಕ್ಷಣ ಈ ಹೊತ್ತಿಗೂ ತುಂಬಾನೇ ನೆನಪಾಗುತ್ತದೆ. ಇಂದು ನಾವು ದೇಶ ದೇಶಗಳನ್ನು ಸುತ್ತಿ ಬಂದರೂ ಬಾಲ್ಯದ ನೆಮ್ಮದಿ ಮತ್ತೆಲ್ಲೂ ಕಾಣ ಸಿಗುವುದಿಲ್ಲ.
ನಮ್ಮ ತಂದೆಯ ಹುಟ್ಟೂರು ತಿರುಪತಿ. ಆ ಸಂದರ್ಭದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ವಿಭಜನೆಯಾಗಿರಲಿಲ್ಲ. ಮೂರು ಸಹ ಮದ್ರಾಸ್ ಪ್ರೆಸಿಡೆನ್ಸಿಯ ಆಡಳಿತ ಹೊಂದಿತ್ತು. ಪ್ರತ್ಯೇಕ ರಾಜ್ಯ ವಿಭಜನೆಯ ನಂತರ ಜನರಿಗೆ ತಮ್ಮ ವಾಸಯೋಗ್ಯ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶವನ್ನು ಭಾರತ ಸರ್ಕಾರ ಜನಸಾಮಾನ್ಯರಿಗೆ ನೀಡುತ್ತದೆ. ಆಗ ನಮ್ಮ ತಂದೆ ಮೈಸೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಬಂದರು. ನಂತರ ಅವರಿಗೆ ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಯಾವುದೇ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶವಿರುತ್ತದೆ. ಆ ಸಂದರ್ಭದಲ್ಲಿ ಸ್ವಇಚ್ಛೆಯಿಂದ ಬಳ್ಳಾರಿಗೆ ವರ್ಗಾವಣೆ ಕೋರಿದರು. ಹೀಗೆ ಬಳ್ಳಾರಿ ಮಣ್ಣಿನೊಡನೆ ನಮ್ಮ ಕುಟುಂಬದ ನಂಟು ಆರಂಭವಾಯ್ತು.
ನಮ್ಮ ತಂದೆಯ ಪೂರ್ವಿಕರು ಸುಸಂಸ್ಕೃತರು ಮತ್ತು ಆರ್ಥಿಕವಾಗಿ ಸ್ಥಿತಿವಂತರಾಗಿದ್ದರು. ನಮ್ಮ ತಾತ ಮುತ್ತಾತಂದಿರು ತಿರುಪತಿಯಲ್ಲಿ ಜಮೀನ್ದಾರರಾಗಿದ್ದರು. ದಾನ-ಧರ್ಮದಿಂದಲೇ ಎಲ್ಲವನ್ನು ಕಳೆದುಕೊಂಡ ಮನೆತನ. ನಮ್ಮ ತಾತ ರಾಮರೆಡ್ಡಿಯವರು ಸ್ವತಂತ್ರ್ಯ ಹೋರಾಟಗಾರರು. ಬ್ರಿಟಿಷರ ದಬ್ಬಾಳಿಕೆಯನ್ನು ವಿರೋಧಿಸಿ ಹೋರಾಟ ಮಾಡಿದವರು. ಬದಲಾದ ಸನ್ನಿವೇಶದಲ್ಲಿ ನಮ್ಮ ತಂದೆ ಸ್ವತಂತ್ರವಾಗಿ ದುಡಿಯುವ ಗುರಿಯೊಂದಿಗೆ ಚೆನ್ನೈ ಗೆ ಬಂದರು. ಅಲ್ಲಿ ತಂದೆ ನಮ್ಮ ತಂದೆ ಚೆಂಗಾ ರೆಡ್ಡಿ ಪೊಲೀಸ್ ಇಲಾಖೆಗೆ ಆಯ್ಕೆಯಾದರು. ೧೯೮೩ ರ ತನಕ ಅಪ್ಪ ಆರಕ್ಷಕ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ನಿವೃತ್ತಿಯಾಗುವ ವೇಳೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದರು. ನಮ್ಮ ತಂದೆ ಶಿಸ್ತಿನ ಸಿಪಾಯಿ ಅಂದರೆ ತಪ್ಪಾಗಲಾರದು. ಇನ್ನು ನನ್ನ ತಾಯಿ ರುಕ್ಮಿಣಿ ಗೃಹಿಣಿ. ನಮ್ಮ ಅಪ್ಪ-ಅಮ್ಮನ ನಡುವಿನ ಒಡನಾಟ ಅದ್ಭುತವಾಗಿತ್ತು. ಕಷ್ಟ-ಸುಖಗಳೆರಡನ್ನು ಒಟ್ಟಿಗೆ ನಿಭಾಯಿಸಿದ ಜೋಡಿಜೀವ. ನಮ್ಮ ತಂದೆ- ತಾಯಿಗೆ ನಾವು ನಾಲ್ವರು ಮಕ್ಕಳು. ಅಕ್ಕ ರಾಜೇಶ್ವರಿ ಹಿರಿಯಾಕೆ. ಆ ಬಳಿಕ ಕ್ರಮವಾಗಿ ಅಣ್ಣಂದಿರಾದ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಹಾಗೂ ನಾನು ಜನಿಸಿದೆವು.
ನಾನು ಹುಟ್ಟಿದ್ದು ೧೯೬೭ ರಲ್ಲಿ... ನಮ್ಮ ತಂದೆ ಶಿಸ್ತಿನ ಸ್ವಭಾವದ ವ್ಯಕ್ತಿ. ನಾನು ಕೊನೆ ಮಗ ಎಂಬ ಕಾರಣಕ್ಕೆ ಅತಿ ಹೆಚ್ಚು ಪ್ರೀತಿಯೇ ಇತ್ತು. ನನ್ನ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಿದ್ದರು. ಚಿಕ್ಕವನು ಎಂಬ ಕಾರಣಕ್ಕೆ ನನ್ನ ಮನೆಯವರೆಲ್ಲರೂ ನನ್ನ ಕುರಿತಾಗಿ ಹೆಚ್ಚು ಕಾಳಜಿ ವಹಿಸುತ್ತಿದ್ದರು. ನಾನು ಮೂರನೇ ವಯಸ್ಸಿನಲ್ಲಿರುವಾಗಲೇ ಅಪ್ಪ-ಅಮ್ಮ ನನಗೆ ಮನೆಪಾಠ ಆರಂಭಿಸಿದರು. ಇದರಿಂದಾಗಿ ನಾನು ಆರನೇ ವಯಸ್ಸಿನಲ್ಲಿ ಓದಿನ ವಿಷಯದಲ್ಲಿ ಚುರುಕಾಗಿದ್ದೆ. ನಮ್ಮ ತಂದೆಯವರು ನನ್ನನ್ನು ಒಂದನೇ ತರಗತಿ ಸೇರಿಸಲು ಕರೆದು ಹೋದಾಗ ಶಿಕ್ಷಕರ ಎದುರು ನನ್ನನ್ನು ನಿಲ್ಲಿಸಿ ನನ್ನ ಮಗನಿಗೆ ನೀವು ಹೇಗೆ ಬೇಕಾದರೂ ಪರೀಕ್ಷಿಸಿ ಆತನನ್ನು ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಸರಿ ಸಮನಾಗಿ ಟ್ರೈನ್ ಮಾಡಿದ್ದೇನೆ ಎಂದರು. ಆಗ ನನ್ನನ್ನು ಪರೀಕ್ಷಿಸಿದ ಶಿಕ್ಷಕರು ನನ್ನ ಪ್ರತಿಭೆ ಮೆಚ್ಚಿ ನೇರವಾಗಿ ನನ್ನನ್ನು ಎರಡನೇ ತರಗತಿಗೆ ಸೇರಿಸಿಕೊಂಡರು. ಅಪ್ಪನೇ ನನ್ನ ಮೊದಲ ಗುರು. ಹರಪನಹಳ್ಳಿ ಸಮೀಪದಲ್ಲಿರುವ ಅಲವಾಗಿಲು ಗ್ರಾಮದಲ್ಲಿ ನಾನು ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದೆ. ಚಿಕ್ಕಂದಿನಿAದಲೂ ನನಗೆ ಹಠ ಜಾಸ್ತಿ. ಆಟ-ಪಾಠದಲ್ಲಿ ಗೆಲ್ಲಲೇಬೇಕೆಂಬ ಕನಸಿತ್ತು. ಅದರಲ್ಲೂ ವಿಶೇಶವಾಗಿ ಆಟಗಳಲ್ಲಿ ಸೋಲುವುದನ್ನು ಒಪ್ಪಿಕೊಳ್ಳಲು ಸಿದ್ದನಿರುತ್ತಿರಲಿಲ್ಲ. ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಕೋ-ಕೋ, ಚಿನ್ನಿ ದಾಂಡು, ಬುಗುರಿ, ಗೋಲಿಯಾಟ ಸೇರಿದಂತೆ ಎಲ್ಲ ರೀತಿಯ ಆಟಗಳನ್ನು ಆಡುತ್ತಿದ್ದೆ. ನಮ್ಮ ಮನೆ ಪೊಲೀಸ್ ಕ್ವಾರ್ಸ್ನಲ್ಲಿ ಇದ್ದದ್ದರಿಂದ ಅಲ್ಲಿನ ವಾತಾವರಣವೇ ಹೊಸತೊಂದು ಅನುಭವ ನೀಡುತ್ತಿತ್ತು. ಅಲವಾಗಿಲು ಗ್ರಾಮದಲ್ಲಿ ನಿಜಲಿಂಗಪ್ಪನವರು ತಮ್ಮ ಆಡಳಿತಾವಧಿಯಲ್ಲಿ ಸುಸಜ್ಜಿತ ಪೊಲೀಸ್ ಕ್ವಾರ್ಟ್ರಸ್ ನಿರ್ಮಾಣ ಮಾಡಿಸಿದ್ದರು. ಪೊಲೀಸರು ಮಕ್ಕಳು ಎಂಬ ಕಾರಣಕ್ಕೆ ನಮಗೆ ಕನಿಷ್ಠ ಸೌಲಭ್ಯಗಳು ಪೊಲೀಸ್ ಕ್ವಾರ್ಟ್ರಸ್ನಲ್ಲಿಯೇ ಸಿಗುತ್ತಿದ್ದವು. ಉತ್ತಮವಾದ ಆಟದ ಮೈದಾನವಿತ್ತು. ಜಾತಿ-ಮತ-ಪಂಥದ ಭೇಧವಿರಲಿಲ್ಲ. ಪೊಲೀಸರ ಮಕ್ಕಳೆಲ್ಲರೂ ಒಟ್ಟಾಗಿ ಆಡುತ್ತಿದ್ದೆವು. ಬದುಕು ಮತ್ತು ಮನಸ್ಸಿನಲ್ಲಿ ನಿರಾಳತೆ ಹಾಗೂ ನಿಷ್ಕಲ್ಮಶ ಸ್ನೇಹ ಮಾತ್ರ ಮನೆ ಮಾಡಿತ್ತು. ನನ್ನ ನೆನಪಿನ ಶಕ್ತಿ ಅಗಾಧ. ನನ್ನ ಬಾಲ್ಯದ ಬಹುತೇಕ ನೆನಪುಗಳು, ಸಂಗತಿಗಳು ಇಂದಿಗೂ ನನ್ನ ಮನಸಲ್ಲಿ ಹಸಿರಾಗಿದೆ.
ಬಳ್ಳಾರಿಯಲ್ಲಿ ಸಂಸ್ಕೃತಿಯ ಸೊಗಡಿತ್ತು. ಪ್ರತಿ ಹಳ್ಳಿಗೂ ಒಂದು ತಾಂಡ ಇರುತ್ತಿತ್ತು. ನಮ್ಮ ಅನೇಕ ಸ್ನೇಹಿತರು ಆ ತಾಂಡಾಗಳಲ್ಲೇ ವಾಸಿಸುತ್ತಿದ್ದರು. ಇನ್ನು ಅವರಲ್ಲಿ ಕೆಲವರಿಗೆ ಮನೆಯಲ್ಲಿ ವಿಪರೀತ ಆರ್ಥಿಕ ಸಂಕಷ್ಟವಿತ್ತು. ಆ ಸಂದರ್ಭದಲ್ಲಿ ಪ್ರತಿ ವಾರಾಂತ್ಯ ಕಾಡಿಗೆ ಹೋಗಿ ಮುಳ್ಳಿನ ಕಟ್ಟಿಗೆ ಕಡಿದು ತಂದು ಸೌದೆ ಒಲೆ ಉರಿಗಾಗಿ ಬಳಸುತ್ತಿದ್ದರು. ಹೀಗೆ ಮಾಡುವುದರಿಂದ ಮನೆಯವರ ಕಷ್ಟಕ್ಕೆ ನೆರವಾದಂತಾಗುತ್ತದೆ ಎಂಬುದು ಅವರ ಉದ್ದೇಶವಾಗಿತ್ತು. ಆಗ ಅವರ ಹೆತ್ತವರು ತಮ್ಮ ಮಕ್ಕಳಿಗೆ ಜೋಳದ ರೊಟ್ಟಿ, ಖಾರದ ಪುಡಿ ಮತ್ತು ಮೊಸರನ್ನು ಕಟ್ಟಿ ಕೊಡುತ್ತಿದ್ದರು. ಯಾಕಂದ್ರೆ ಬೆಳಿಗ್ಗೆ ಸೌದೆಗಾಗಿ ಕಾಡು ಹೊಕ್ಕರೆ ಮನೆಗೆ ಮರಳುವುದು ರಾತ್ರಿಯಾಗುತ್ತಿತ್ತು. ಬರೋಬ್ಬರಿ ಮೂವತ್ತು ಮಂದಿ ಹುಡುಗರು ನಮ್ಮೊಟ್ಟಿಗೆ ಇರುತ್ತಿದ್ದರು. ನಾನು ಹಾಗೂ ನನ್ನ ಇಬ್ಬರು ಅಣ್ಣಂದಿರು ಆ ಹುಡುಗರಿಗೆ ನಮ್ಮ ಕೈಲಾದ ಮಟ್ಟಿಗೆ ಸೌದೆ ಹೊಂದಿಸಿಕೊಡುವುದರ ಮೂಲಕ ಸಹಾಯ ಮಾಡುತ್ತಿದ್ದೆವು. ಆದರೆ ಈ ವಿಷಯವನ್ನು ನಮ್ಮ ತಂದೆಯಿಂದ ಮುಚ್ಚಿಟ್ಟಿದ್ದೆವು. ಹಾಗಾಗಿ ಕೆಲವೊಮ್ಮೆ ನಾವು ಮನೆಗೆ ತಡವಾಗಿ ಹಿಂದಿರುಗಿದರೆ ನಮ್ಮ ತಾಯಿ ಗಾಬರಿಯಾಗುತ್ತಿದ್ದರು. ಸ್ವಲ್ಪ ದಿನಗಳ ನಂತರ ನಮ್ಮ ತಂದೆಗೆ ಹೀಗೆ ನಾವು ಮೂರು ಮಕ್ಕಳು ಕಾಡಿಗೆ ಹೋಗಿ ಕಟ್ಟಿಗೆ ಹೊಂದಿಸಲು ಸ್ನೇಹಿತರಿಗೆ ಸಹಾಯ ಮಾಡುತ್ತಿದ್ದೇವೆ ಎಂದು ತಿಳಿದ ಮೇಲೆ ತುಂಬಾನೇ ಖುಷಿ ಪಟ್ಟರು. ಚಿಕ್ಕ ವಯಸ್ಸಿನಲ್ಲಿಯೇ ನಾಲ್ಕು ಮಂದಿಗೆ ಸಹಾಯ ಮಾಡುವ ಮನೋಭಾವ ಇದೆಯೆಲ್ಲಾ.. ಎಂದು ಸಂತಸ ಪಟ್ಟು ನಮ್ಮ ಬೆನ್ನು ತಟ್ಟಿದ್ದರು. ಆದರೆ ನಿಜದಲ್ಲಿ ಹೇಳಬೇಕೆಂದರೆ ಈ ಸನ್ನಡತೆಗಳೆಲ್ಲ ನಮ್ಮ ತಂದೆ-ತಾಯಿ ಕಲಿಸಿಕೊಟ್ಟ ಸಂಸ್ಕಾರದಿಂದಲೇ ನಮ್ಮೊಳಗೆ ಜಾಗೃತವಾದಂಥವು.
ನನ್ನ ಬಳ್ಳಾರಿಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದು, ಒಂದು ವರ್ಷ ಮಾತ್ರ ಹೊಸಪೇಟೆಯಲ್ಲಿ ಓದಿದೆ. ಆ ಸಂದರ್ಭದಲ್ಲಿ ನಮ್ಮ ತಂದೆಗೆ ವರ್ಗಾವಣೆಯಾಗಿತ್ತು. ೬ ನೇ ತರಗತಿಯನ್ನು ಹೊಸಪೇಟೆಯಲ್ಲಿ ಓದಿದ್ದೆ. ಶಾಲೆ, ಸ್ಥಳ ಬದಲಾಗಿದ್ದು ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ಹೊಸ ಜಾಗ, ಹೊಸ ಶಾಲೆಗೆ ಹೊಂದುಕೊಳ್ಳುವುದು ಕಷ್ಟವಾಗಿ ಹೋಗಿತ್ತು. ಆ ಸಂದರ್ಭದಲ್ಲಿ ನಾನು ಪರೀಕ್ಷೆಗೂ ಸಹ ಮನಸ್ಸಿಟ್ಟು ಓದಿರಲಿಲ್ಲ. ಪರೀಕ್ಷೆಯ ವೇಳೆ ಏನು ಬರೆಯದೇ ಸುಮ್ಮನೆ ಕುಳಿತಿದ್ದೆ. ಆಗ ಶಾರದಾ ಮೇಡಮ್ ನನ್ನ ಬಳಿ ಬಂದು ಯಕೆ ಏನನ್ನು ಬರೆಯುತ್ತಿಲ್ಲ ಎಂದು ಕಾರಣ ಕೇಳಿದರು. ನಾನು ನೇರವಾಗಿ ಪರೀಕ್ಷೆಗೆ ಸಿದ್ದನಾಗಿಲ್ಲ ಎಂದು ಕೋಪದಲ್ಲಿ ಮನಸೋ ಇಚ್ಛೆ ಹೊಡೆದುಬಿಟ್ಟರು. ನಾನು ಶಾಲೆಯಲ್ಲಿ ಬ್ಯಾಗ್, ಪುಸ್ತಕ ಎಲ್ಲವನ್ನು ಬಿಟ್ಟು ನಮ್ಮ ತಂದೆಯಿದ್ದ ಪೊಲೀಸ್ ಠಾಣೆಗೆ ಬಂದು ನನಗಾದ ಗಾಯಗಳನ್ನು ತೋರಿಸಿದೆ. ನನಗಾದ ಗಾಯಗಳನ್ನು ನೋಡಿ ನಮ್ಮ ತಂದೆ ಕಣ್ಣಲ್ಲಿ ಅಕ್ಷರಶಃ ನೀರಾಡಿತು. ಆಗ ನಮ್ಮ ತಂದೆ ನನ್ನ ಸೈಕಲ್ಲಿನಲ್ಲಿ ಕೂರಿಸಿಕೊಂಡು ಮತ್ತೆ ಶಾಲೆಗೆ ಕರೆದುಕೊಂಡು ಬಂದರು. ಆಗಾಲ್ಲಿ ಬಹದ್ದೂರ್ ಶೇಷಗಿರಿ ರಾವ್ ಎಂಬ ಶಿಕ್ಷಕರಿದ್ದರು. ಅವರಿಗೆ ಪ್ರೆಸಿಡೆಂಟ್ ಅವಾರ್ಡ್ ಸಹ ಸಿಕ್ಕಿತ್ತು. ಅವರ ಬಳಿಯಲ್ಲಿ ನಮ್ಮ ತಂದೆ ನಡೆದ ವಿಷಯವನ್ನು ತಿಳಿಸಿದರು. ನನ್ನ ಮಗ ತುಂಬಾ ಚೆನ್ನಾಗಿ ಓದುತ್ತಾನೆ. ನಾನು ಬೇರೆಡೆಯಿಂದ ಇಲ್ಲಿಗೆ ವರ್ಗಾವಣೆಯಾಗಿ ಬಂದ ಕಾರಣ ಆತ ಕೊಂಚ ವಿಚಲಿತನಾಗಿದ್ದಾನೆ. ಆ ಕಾರಣಕ್ಕೆ ಆತ ತಾನು ಓದಲಾಗಿಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಹೇಳಿದ್ದಾನೆ. ಹೀಗಿದ್ದು ಹೊಡೆದರೆ ಆತ ಮುಂದೆ ಸುಳ್ಳು ಹೇಳುವುದನ್ನು ಕಲಿಯಬಹುದು ಎಂದರು. ಆತನ ಸಮಸ್ಯೆ ತಿಳಿಯದೇ ಹೀಗೆ ಹೊಡೆಯುವುದು ತಪ್ಪಲ್ಲವೇ ಎಂದು ಕೇಳಿದರು. ಅನಂತರ ಮುಖ ಶಿಕ್ಷಕರು ಶಾರದಾ ಟೀಚರ್ ಅವರನ್ನು ಕರೆಸಿ ವಿಷಯ ತಿಳಿಸಿದರು. ನನಗೆ ಅವಮಾನ ಮಡಿಸಿದ ಎಂದು ತಪ್ಪೆಣಿಸದೆ ನನಗೆ ಮಾರ್ಗದರ್ಶಕರಾದರು. “ಮಾನವಸೇವೆ ಮಾಧವಸೇವೆ” ಹೆಸರಿನಲ್ಲಿ ನಡೆದ ಆಶುಭಾಷಣ ಸ್ಪರ್ಧೆಗೆ ಅವರೇ ಭಾಷಣ ಬರೆದುಕೊಟ್ಟು ನಾನು ಸ್ಪರ್ಧಿಸುವಂತೆ ಮಾಡಿದರು. ನಿನ್ನ ಧೈರ್ಯ ಮತ್ತು ನೇರವಂತಿಕೆಯನ್ನು ಮೆಚ್ಚಿ ಈ ಅವಕಾಶ ಎಂದರು. ಅವರೇ ನನ್ನ ರೋಲ್ ಮಾಡೆಲ್. ಇವತ್ತಿಗೂ ಅವರು ಬಳ್ಳಾರಿಯಲ್ಲಿ ವಾಸವಿದ್ದು.. ಸಂದರ್ಭ ಸಿಕ್ಕಾಗಲೆಲ್ಲಾ ಭೇಟಿಯಾಗುತ್ತಿರುತ್ತೇನೆ. ನಾನು ಇಂದು ರಾಜಕೀಯ ಎಷ್ಟೇ ಬೆಳೆದಿದ್ದರೂ, ಆರ್ಥಿಕವಾಗಿ ಎಷ್ಟೇ ಸುಸ್ಥಿತಿಯಲ್ಲಿದ್ದರೂ ಬಳ್ಳಾರಿ ನೀಡುವ ನೆಮ್ಮದಿ, ಖುಷಿ ಬೇರೆಲ್ಲೂ ಸಿಗುವುದಿಲ್ಲ. ನಾನು ಯಾವುದೇ ರಾಜ್ಯಕ್ಕೆ, ದೇಶಕ್ಕೆ ಹೋದರೂ ನನ್ನ ಮನಸ್ಸು ಮಾತ್ರ ಬಳ್ಳಾರಿಯಲ್ಲಿಯೇ ಇರುತ್ತದೆ. ವಿದೇಶಗಳಲ್ಲಿನ ಅಧುನಿಕತೆ, ವೈಶಿಷ್ಟತೆಗಳನ್ನು ನೋಡಿದಾಗ ನಮ್ಮ ಬಳ್ಳಾರಿಯನ್ನು ಸಹ ಹೀಗೆ ಅಭಿವೃದ್ಧಿ ಮಾಡಬೇಕೆಂಬ ಕನಸು ನನ್ನೊಳಗೆ ಜಾಗೃತವಾಗುತ್ತದೆ.
ನನ್ನ ತಂದೆಯ ಕುಟುಂಬ ಮತ್ತು ತಾಯಿ ಕುಟುಂಬದವರು ಮೊದಲಿಂದಲೂ ಬಂಧುಗಳೇ ಆಗಿದ್ದರು. ನನ್ನ ತಂದೆ-ತಾಯಿಗೆ ಒಟ್ಟಾರೆಯಾಗಿ ೨೦ಕ್ಕೂ ಹೆಚ್ಚು ಎಕರೆ ಜಮೀನಿತ್ತು. ಅದರಿಂದ ಬರುತ್ತಿದ್ದ ಆದಾಯ ಅಪ್ಪ ಪೊಲೀಸ್ ನೌಕರರಾಗಿ ಪಡೆಯುತ್ತಿದ್ದ ಸಂಬಳದ ನಾಲ್ಕು ಪಟ್ಟಿತ್ತು. ಹೀಗಾಗಿ ನಮ್ಮ ಬಾಲ್ಯದಲ್ಲಿ ಎಲ್ಲರನ್ನು ಅಪ್ಪ ಚೆನ್ನಾಗಿಯೇ ನೋಡಿಕೊಂಡರು. ಉತ್ತಮ ಶಿಕ್ಷಣ ನೀಡುವ ವಿಚಾರದಲ್ಲಿ ಆರ್ಥಿಕ ಮುಗ್ಗಟ್ಟು ನಮ್ಮನ್ನು ಎಂದಿಗೂ ಕಾಡಿರಲಿಲ್ಲ. ನಮ್ಮ ತಂದೆಗೆ ಮಹಾಭಾರತ, ರಾಮಾಯಣ ಬಗ್ಗೆ ವಿಶೇಷ ಪ್ರೀತಿಯಿತ್ತು. ಅದನ್ನು ಅವರೇ ನಮಗೆ ಓದಿ ಹೇಳುತ್ತಿದ್ದರು. ನಾವು ಬೆಳೆದಂತೆಲ್ಲಾ ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಕೊಂಡು ತಂದು ಓದುವಂತೆ ಪ್ರೇರೇಪಿಸುತ್ತಿದ್ದರು. ಅಪ್ಪ ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು. ನಾವು ಓದಿದ್ದನ್ನು ಹತ್ತು ಮಂದಿಗೆ ಹೇಳಿದಾಗ ಅದು ಸ್ಮೃತಿಲಪಟಲದಲ್ಲಿ ಅಚ್ಚಾಗಿ ಉಳಿಯುತ್ತದೆ.. ಎಂಬುದು ಅಪ್ಪನ ನಿಲುವಾಗಿತ್ತು. ನನ್ನ ಅನುಭವದಲ್ಲಿಯೂ ಅದು ನಿಜ. ಇನ್ನು ನಮ್ಮ ಸಂಸೃತಿ , ಸಂಪ್ರದಾಯವನ್ನು ತುಂಬಾನೇ ಗೌರವಿಸುತ್ತಿದ್ದರು. ಎಲ್ಲಾ ಹಬ್ಬ-ಹರಿದಿನಗಳನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದರು. ಆ ಹಬ್ಬಗಳ ಆಚರಣೆಗಾಗಿಯೇ ಅವರು ಮಾಡುತ್ತಿದ್ದ ತಯಾರಿ ಕೂಡ ಬಹಳ ವಿಶೇಷವಾಗಿತ್ತು. ಇಷ್ಟೆಲ್ಲಾ ಸುಖ-ಸೌಖ್ಯಗಳ ನಡುವೆ ನಾವು ಬೆಳೆದವು. ಆದರೆ ನಾವು ದುಡಿಯುವ ಕಾಲಕ್ಕೆ ಅಪ್ಪ ನಮ್ಮೊಡನಿರಲಿಲ್ಲ.. ನಮ್ಮ ಯಶಸ್ಸನ್ನು ಅವರು ನೋಡಲಿಲ್ಲ ಎಂಬ ನೋವು ಈ ಹೊತ್ತಿಗೂ ಕಾಡುತ್ತದೆ. ನಾನು ೨೦ ನೇ ವಯಸ್ಸಿನಲ್ಲಿದ್ದಾಗ ನಮ್ಮ ತಂದೆ ದೈವಾಧೀನರಾದರು.
ಕಷ್ಟಕ್ಕಾಗುವವನೇ ನಿಜವಾದ ಗೆಳೆಯ ಅಂತಾರೆ. ಯಾವುದೇ ವ್ಯಕ್ತಿಯ ವ್ಯಕ್ತಿತ್ವ ತಿಳಿಯ್ವುದು ಆತ ಎಷ್ಟು ಮಂದಿ ಸ್ನೇಹಿತರನ್ನು ಸಂಪಾದಿಸಿದ್ದಾನೆ.. ಹಾಗೂ ಯಾವ ರೀತಿಯ ಸ್ನೇಹಿತರನ್ನು ಸಂಪಾದಿಸಿದ್ದಾನೆ ಎಂಬುದರ ಮೇಲೆ. ಚಿಕ್ಕಂದಿನಿಂದಲೂ ನಾನು ಸಂಬಂಧಗಳಿಗೆ ಬೆಲೆ ಕೊಡುತ್ತಾ ಬಂದವನು. ನಮ್ಮ ಮನೆಯಲ್ಲಿದ್ದ ವಾತಾವರಣವೇ ನಮ್ಮನ್ನು ಹಾಗೆ ಬೆಳೆಸಿತ್ತು ಎಂದರೆ ತಪ್ಪಾಗಲಾರದು. ನನಗೆ ಅನೇಕ ಸ್ನೇಹಿತರಿದ್ದಾರೆ. ಆದರೆ ಬಾಲದ ಗೆಳೆಯ ಎಂದಾಗ ನೆನಪಾಗುವ ಮೊದಲ ಗೆಳೆಯ ಪ್ರೇಮ್ಬಾಬು. ಆತ ಹುಟ್ಟಿ ಸ್ವಲ್ಪ ತಿಂಗಳು ಕಳೆಯುವಷ್ಟರಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ. ಆತನ ಅಜ್ಜಿ ಮತ್ತು ಸೋದರ ಮಾವಂದಿರ ಪ್ರೀತಿಯಲ್ಲಿ ಬೆಳೆದ ಹುಡುಗ. ನಾನು ಎರಡನೇ ತರಗತಿಯಲ್ಲಿದ್ದಾಗ ಆತ ಗೆಳೆಯನಾದ. ಅಂದು ಆದ ಪರಿಚಯ ನನಗೊಬ್ಬ ಉತ್ತಮ ಸ್ನೇಹಿತ ಸಿಗಲು ಕಾರಣವಾಯ್ತು. ೨ನೇ ತರಗತಿಯಿಂದ ೧೦ ನೇ ತರಗತಿಯವರೆಗೂ ನಾವಿಬ್ಬರು ಒಟ್ಟಿಗೆ ವಿದ್ಯಾಭ್ಯಾಸ ಮಾಡಿದೆವು. ನಮ್ಮ ನಡುವೆ ಒಂದು ಅವಿನಾಭಾವ ಬಂಧ ಬೆಳೆದಿತ್ತು. ಆ ದಿನಗಳಲ್ಲಿ ದಿನದ ಬಹುತೇಕ ಸಮಯವನ್ನು ಒಟ್ಟಿಗೆ ಕಳೆದೆವು. ಆಟ-ಪಾಠಗಳೆಡರಲ್ಲೂ ಆತ ಸಾಥಿಯಾಗಿದ್ದ. ಇಂದಿಗೂ ಆತ ನನ್ನ ಜೀವದ ಗೆಳೆಯ. ಆತನಿಗೆ ಹೆತ್ತವರಿಲ್ಲ ಎಂಬ ಕಾರಣಕ್ಕೆ ನನಗೆ ಆತನ ಮೇಲೆ ಅತಿ ಹೆಚ್ಚು ಪ್ರೀತಿ, ಸ್ನೇಹವಿತ್ತು. ಈಗ ಬಳ್ಳಾರಿಯಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ಸ್ನೇಹ ಇಂದಿಗೂ ನಮ್ಮ ನಡುವಿದೆ. ನಾನು ಮಂತ್ರಿಯಾದ ನಂತರವು ನನ್ನೆಲ್ಲಾ ಆತ್ಮೀಯ ಸ್ನೇಹಿತರನ್ನು ಮನೆಗೆ ಕರೆಸಿ ಅವರಿಗೆ ವಿಶೇಷ ಔತಣ ನೀಡಿ ಪ್ರೀತಿಪೂರ್ವಕವಾಗಿ ಸನ್ಮಾನಿಸಿ ಸತ್ಕರಿಸಿದ್ದೆ.
ಸಿನಿಮಾ ವಿಷಯ ಬಂದಾಗ ಬಳ್ಳಾರಿಯ ಜನರು ಕನ್ನಡ ಮತ್ತು ತೆಲುಗು ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾರೆ. ಒಂದೆಡೆ ರಾಜ್ಕುಮಾರ್, ವಿಷ್ಣುವರ್ಧನ್, ಶಂಕರ್ನಾಗ್ ಅವರನ್ನು ಇಷ್ಟಪಟ್ಟರೆ ಇನ್ನೊಂದೆಡೆ ಎನ್ಟಿಆರ್, ಕೃಷ್ಣ ಅವರ ಚಿತ್ರಗಳನ್ನು ಸಹ ನೋಡುತ್ತಿದ್ದರು. ರಾಜ್ಕುಮಾರ್ ಮತ್ತು ಎನ್ಟಿಆರ್ ಇಬ್ಬರನ್ನು ಅತೀವವಾಗಿ ಪ್ರೀತಿಸುತ್ತಿದ್ದರು. ಇಬ್ಬರು ನಟರ ಚಿತ್ರಗಳು ಶತದಿನೋತ್ಸವ ಆಚರಿಸುತ್ತಿತ್ತು. ನಾನು ಕೂಡ ಈ ಮಹಾನ್ ನಟರ ಚಿತ್ರಗಳನ್ನು ನೋಡುತ್ತಾ ಬೆಳೆದವನು. ನನಗೆ ವರನಟ ಡಾ. ರಾಜ್ಕುಮಾರ್ ನಟನೆಯ ಜೊತೆಗೆ ಸರಳತೆ ಮತ್ತು ವ್ಯಕ್ತಿತ್ವದಿಂದಲೂ ಬಹಳಷ್ಟು ಪ್ರಭಾವ ಬೀರಿದ್ದರು. ನನಗೆ ನೆನಪಿರುವಂತೆ ನಾನು ನೋಡಿದ ಮೊದಲ ಚಿತ್ರ ‘ಪ್ರೇಮ್ನಗರ್’. ಆಗ ನನಗೆ ೫-೬ ವರ್ಷ ಅನಿಸುತ್ತದೆ. ಬಳ್ಳಾರಿಯ ‘ರಾಯಲ್ ಟಾಕೀಸ್’ನಲ್ಲಿ ಆ ಚಿತ್ರ ನೋಡಿದ್ದೆ. ಆ ಚಿತ್ರದಲ್ಲಿ ನಾಯಕ ಅದ್ಧೂರಿ ಕಾರಿನಲ್ಲಿ ಬರುವ ಸನ್ನಿವೇಶಗಳು ಹಾಗೂ ಆ ಚಿತ್ರದ ಹಾಡುಗಳು ಸೇರಿದಂತೆ ಅನೇಕ ಸಂಗತಿಗಳು ಇಂದಿಗೂ ಮೆದುಳಲ್ಲಿ ಅಚ್ಚಾಗಿದೆ.
ಸಿನಿಮಾ ಮೇಲಿನ ನನ್ನ ಮೋಹ ಎಷ್ಟರ ಮಟ್ಟಿಗೆ ಇದೆಯೆಂದರೆ ನಾನು ಮಂತ್ರಿಯಾದ ಬಳಿಕವು ನನ್ನ ಬಹು ನಿರೀಕ್ಷೆಯ ಚಿತ್ರಗಳು ತೆರೆ ಕಂಡಾಗ ಥಿಯೇಟರ್ಗೆ ಹೋಗಿ ಸಿನಿಮಾ ನೋಡಿದ್ದುಂಟು. ಆದರೆ ಹೀಗೆ ಸಿನಿಮಾ ನೋಡಲು ಹೋದಾಗ ಶ್ರೀಸಾಮಾನ್ಯರಿಗೆ ಇರಿಸು ಮುರಿಸು ಆಗಬಾರದು ಎಂಬ ಕಾರಣಕ್ಕೆ ಮನೆಯಲ್ಲಿಯೇ ಪುಟ್ಟ ಥಿಯೇಟರ್ವೊಂದನ್ನು ಮಾಡಿಸಿಕೊಂಡೆ. ಅಣ್ಣಾವ್ರ ಹಾಗೂ ಎನ್ಟಿಆರ್ ಅವರ ಚಿತ್ರಗಳು ಮನೋರಂಜನೆಯ ಜೊತೆಗೆ ಜೀವನಪಾಠವನ್ನು ಹೇಳುತ್ತಿದ್ದವು. ಕನ್ನಡದಲ್ಲಿ ಅದರಲ್ಲೂ ವಿಶೇಷವಾಗಿ ಅಣ್ಣಾವ್ರ ಚಿತ್ರದ ಹಾಡುಗಳಲ್ಲಿದ್ದ ಅರ್ಥ ಮತ್ತು ವಿಶೇಷತೆ ಎಂಥವರಿಗೂ ಸ್ಪೂರ್ತಿ ತುಂಬುವAತಿತ್ತು. “ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ..” ಎಂಬ ಹಾಡು ಎಂಥ ಬಂಡನೆದೆಯಲ್ಲೂ ದುಡಿದು ತಿನ್ನಬೇಕೆನ್ನುವ ಕನಸು ಹುಟ್ಟಿಸುತ್ತದೆ.
ನಾನು ಪ್ರತಿ ಬಾರಿ ಮಂತ್ರಾಲಯಕ್ಕೆ ಭೇಟಿ ನೀಡಿದಾಗ ರಾಯರ ಬೃಂದಾವನದಲ್ಲಿ ಕುಳಿತು ಹಾಡುವ ಹಾಡು ಡಾ.ರಾಜ್ಕುಮಾರ್ ಅವರು ಹಾಡಿರುವ ‘ದೇವತಾ ಮನುಷ್ಯ’ ಚಿತ್ರದ ‘ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ರಾಘವೇಂದ್ರ’ ಎಂಬ ಗೀತೆ. ಆ ಗೀತೆಯಲ್ಲಿನ ಪ್ರತಿ ಪದವೂ ಹೃದಯಕ್ಕೆ ತಟ್ಟುವಂತಿದೆ. ಆ ಸಾಲುಗಳು ರಾಜ್ಕುಮಾರ್ ಅವರ ಧ್ವನಿಯಲ್ಲಿ ಜೀವಂತಿಕೆ ಪಡೆದುಕೊಂಡಿದೆ. ಇನ್ನು ವಿಷ್ಣುವರ್ಧನ್ ಅವರು ‘ಜಿಮ್ಮಿಗಲ್ಲು’ ಚಿತ್ರಕ್ಕಾಗಿ ಹಾಡಿರುವ ತುತ್ತು ಅನ್ನ ತಿನ್ನೋಕೆ ಎಂಬ ಹಾಡು ಕೂಡ ಮನಸ್ಸನ್ನು ಆವರಿಸಿಕೊಳ್ಳುವಂತಿದೆ. ಈ ಭೂಮಿ ಬಣ್ಣದ ಬುಗುರಿ ಹಾಡು ಕೂಡ ಮನುಷ್ಯನ ಜೀವನಕ್ಕೆ ಮತ್ತು ಬದುಕಿನ ವಾಸ್ತವಕ್ಕೆ ಹಿಡಿದ ಕೈಗನ್ನಡಿಯಂತಿದೆ.
ನಮ್ಮ ತಾಯಿ ನಮ್ಮ ತಂದೆಯವರನ್ನು ಮದುವೆಯಾಗುವ ಸಂದರ್ಭದಲ್ಲಿ ಯಾವುದೇ ವಿದ್ಯಾಭ್ಯಾಸವನ್ನು ಮಾಡಿರಲಿಲ್ಲ. ಅಮ್ಮ ಮದುವೆಯಾದ ಬಳಿಕ ತಂದೆಯವರ ಜೊತೆಗೆ ಶಿಕ್ಷಣವನ್ನು ಪಡೆದರು. ಬಳ್ಳಾರಿಯಲ್ಲಿ ನಮ್ಮ ತಾಯಿಗೆ ‘ಮಹಾತಾಯಿ’ ಅಂತಲೇ ಕರೆಯುತ್ತಾರೆ. ಕಾರಣವೇನೆಂದರೆ ೧೯೯೦ ರಲ್ಲಿ ನಮ್ಮ ತಂದೆ ನಿಧನರಾದ ಸಂದರ್ಭದಲ್ಲಿ ನಾನು ಕೇವಲ ೨೦ ವರ್ಷದ ಹುಡುಗನಾಗಿದ್ದೆ. ಆಗ ನನ್ನ ಅಣ್ಣಂದಿರು ಸಹ ಪದವಿಯನ್ನು ಆಗಷ್ಟೇ ಮುಗಿಸಿದ್ದರು. ಆ ಸಂದರ್ಭದಲ್ಲಿ ಅಪ್ಪನ ಆಕಸ್ಮಿಕ ಸಾವಿನಿಂದಾಗಿ ಮಾನಸಿಕವಾಗಿ ಕುಗ್ಗಿದ್ದ ನಮಗೆ ಆತ್ಮಸ್ಥೈರ್ಯ ಹೆಚ್ಚಿಸಿದ್ದು ನಮ್ಮ ತಾಯಿ. ಅವರು ನಮಗಾಗಿ ದೃಢ ಮನಸ್ಸು ಮಾಡಿಕೊಂಡು ಬದುಕು ಕಟ್ಟಿದರು. ನಂತರದ ದಿನಗಳಲ್ಲಿ ನಾನು ಫೈನಾನ್ಸ್ ಕಂಪೆನಿ ನಡೆಸುತ್ತಿದ್ದೆ. ರಾಜ್ಯದಲ್ಲಿ ೧೨೫ ಬ್ರಾಂಚ್ಗಳನ್ನು ಆರಂಭಿಸಿದ್ದೆ. ಕೆಲಸದ ನಿಮಿತ್ತ ನಾನು ಬಳ್ಳಾರಿಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಯಾವುದೇ ಬ್ರಾಂಚ್ ಮ್ಯಾನೇಜರ್ ಕರೆ ಮಾಡಿ ಏನಾದರೂ ಸಮಸ್ಯೆಯನ್ನು ಹೇಳಿದರೆ ಅದನ್ನು ಮನಸ್ಸಿಟ್ಟು ಕೇಳಿಸಿಕೊಂಡು, ತಮಗೆ ಅರ್ಥವಾಗುವ ರೀತಿಯಲ್ಲಿ ಹೆಸರು, ಊರು ಬರೆದಿಟ್ಟುಕೊಂಡಿರುತ್ತಿದ್ದರು. ನಾನು ಮನೆಗೆ ಹಿಂದಿರುಗುವ ಹೊತ್ತಿಗೆ ನೂರಕ್ಕೂ ಹೆಚ್ಚು ಕರೆಗಳು ಬಂದಿರುತ್ತಿತ್ತು. ಆದರೆ ತಾವು ಬರೆದುಕೊಂಡ ಹೆಸರು, ಊರು ಗಮನಿಸಿದ ಕೂಡಲೇ ಅವರು ಈ ಕಾರಣಕ್ಕೆ ಕರೆ ಮಾಡಿದ್ದರು, ಅವರ ಸಮಸ್ಯೆ ಹೀಗೀಗಿದೆ ಎಂದು ಕರಾರುವಕ್ಕಾಗಿ ಹೇಳಿ ಬಿಡುತ್ತಿದ್ದರು. ಅಮ್ಮನ ನೆನಪಿನ ಶಕ್ತಿಯ ಅಗಾಧತೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿತ್ತು. ಇದರ ಜೊತೆಗೆ ಮನೆಗೆ ಯಾರೇ ಬಂದರೂ ಬರೀ ಕಾಫಿ ಟೀ ಕೊಟ್ಟು ಸುಮ್ಮನಾಗುತ್ತಿರಲಿಲ್ಲ. ಬಂದವರ ಹಸಿವು ತಣಿಸಿಯೇ ಕಳಿಸಬೇಕೆನ್ನುವ ಗುಣ ಅಮ್ಮನದು. ೧೯೯೯ ರಲ್ಲಿ ಸುಷ್ಮಾ ಸ್ವರಾಜ್ ಬಳ್ಳಾರಿಯಲ್ಲಿ ನಿಂತು ಸೋತ ಬಳಿಕವು ನಮ್ಮ ಅಮ್ಮ ಕಾರ್ಯಕರ್ತರನ್ನು ಮೊದಲಿಗಿಂತಲೂ ಹೆಚ್ಚು ಆತ್ಮೀಯತೆಯಿಂದ ನೋಡಿಕೊಂಡರು. ಬಳ್ಳಾರಿ ನಗರದಲ್ಲಿ ಹಳೇ ರಾಜಕಾರಣಿಗಳು ಯಾವ ರೀತಿಯ ಸಾರ್ವಭೌಮತ್ವ ಸೃಷ್ಟಿಸಿಕೊಂಡಿದ್ದರೆಂದರೆ ಶ್ರೀಸಾಮಾನ್ಯರು ಆ ರಾಜಕಾರಣಿಗಳ ಮನೆ ಮುಂದೆ ನಡೆಯುವಾಗ ತಮ್ಮ ಕಾಲಿನಲ್ಲಿರುವ ಚಪ್ಪಲಿ ತೆಗೆದು ಅದನ್ನು ಬಗಲಿಟ್ಟುಕೊಂಡು ತಲೆ ತಗ್ಗಿಸಿ ನಡೆಯಬೇಕಿತ್ತು. ಇಂಥದ್ದೊಂದು ಅನಿಷ್ಠ ಪದ್ದತಿ ಆ ದಿನಗಳಲ್ಲಿತ್ತು.
ಅಮ್ಮ ಹುಟ್ಟಿ ಬೆಳೆದದ್ದೆಲ್ಲಾ ಆಂಧ್ರದಲ್ಲಿ. ಅವರು ಮದುವೆಯಾಗಿದ್ದು ಕೂಡ ೧೫ನೇ ವರ್ಷಕ್ಕೆ.. ಹೀಗಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಂಸಾರದ ಜವಾಬ್ದಾರಿ ಅಮ್ಮನ ಹೆಗಲೇರಿತು. ನಮ್ಮ ತಾಯಿಯ ಕುಟುಂಬದವರು ಧೀರು ಬ್ರಹ್ಮೆಂದ್ರ ಸ್ವಾಮಿಗಳ ತತ್ವವನ್ನು ಪಾಲಿಸಿಕೊಂಡು ಬಂದಿದ್ದರು. ಧೀರು ಬ್ರಹ್ಮೆಂದ್ರ ಸ್ವಾಮಿಗಳು ಜಾತ್ಯಾತೀತವಾಗಿ ಬದುಕಬೇಕು ಎಂಬ ಸಂದೇಶ ಸಾರಿದವರು. ಜಾತಿಗಿಂತ ನೀತಿ ಮುಖ್ಯ ಎಂಬ ಸಂದೇಶವನ್ನು ನಮ್ಮ ತಾಯಿ ಕೂಡ ನಂಬಿದ್ದರು. ಹೀಗಾಗಿ ಶ್ರೀರಾಮುಲು ಅವರನ್ನು ಸಹ ನನ್ನ ಅಮ್ಮ ಸ್ವಂತ ಮಗನಂತೆಯೇ ನೋಡಿಕೊಂಡರು. ಅಮ್ಮ ಸಾಯುವ ಕೆಲ ತಿಂಗಳ ಮೊದಲು ನನ್ನ ಅಂತಿಮ ಸಂಸ್ಕಾರ ಮಾಡುವಾಗ ನಿನ್ನೊಂದಿಗೆ ಶ್ರೀರಾಮುಲು ಕೂಡ ನನ್ನ ಚಿತೆಗೆ ಅಗ್ನಿಸ್ಪರ್ಶ ಮಾಡಬೇಕೆಂದು ಕೇಳಿಕೊಂಡಿದ್ದರು. ಶ್ರೀರಾಮುಲು ಅವರಿಗೆ ಬಳ್ಳಾರಿಯಲ್ಲಿ ಸಾಕಷ್ಟು ವಿರೋಧಿಗಳಿದ್ದರು. ಒಂದು ಹಂತದಲ್ಲಿ ಶ್ರೀರಾಮುಲು ಅವರ ಜೀವಕ್ಕೂ ಅಪಾಯವಿದ್ದಂತಹ ದಿನಗಳಿದ್ದವು. ಈ ಮಧ್ಯೆ ನನ್ನ ಮತ್ತು ಶ್ರೀರಾಮುಲು ಸ್ನೇಹ ಒಂದೇ ಜೀವ ಎರಡು ದೇಹ ಎನ್ನುವಂತಿತ್ತು. ಶ್ರೀರಾಮುಲು ವೈರಿಗಳು ನಮ್ಮ ತಾಯಿಗೆ ಬೆದರಿಕೆ ಕರೆ ಮಾಡಿ “ನಿಮ್ಮ ಮಕ್ಕಳಿಗೆ ಆ ಶ್ರೀರಾಮುಲು ಸಹವಾಸ ಬಿಡಲು ಹೇಳಿ, ಇಲ್ಲದಿದ್ದರೆ ಅನಾಹುತ ಗ್ಯಾರಂಟಿ” ಎಂದು ಧಮಕಿ ಹಾಕುತ್ತಿದ್ದರು. ಇಷ್ಟಾದರೂ ಅಮ್ಮ ಎಂದಿಗೂ ಎದೆಗುಂದಲಿಲ್ಲ. “ಹುಟ್ಟೋದು ಒಂದ್ಸಲ, ಸಾಯೋದು ಒಂದ್ಸಲ.. ಅದೇನು ಮಾಡ್ತಿರೋ ಮಾಡಿ. ಶ್ರೀರಾಮುಲುನನ್ನು ನಮ್ಮ ಕುಟುಂಬ ದೂರ ಇಡುವ ಪ್ರಶ್ನೆಯೇ ಇಲ್ಲ” ಎಂದು ಸಾರ್ವಜನಿಕ ಹೇಳಿದ್ದು ನನ್ನಮ್ಮನ ಗಟ್ಟಿತನಕ್ಕೆ ಸಾಕ್ಷಿ. ‘ನಮ್ಮಿಬ್ಬರ ಸ್ನೇಹ ಚಿರಕಾಲ ಹೀಗೆ ಇರಬೇಕು’ ಎಂಬುದು ನನ್ನ ಅಮ್ಮನ ಆಶಯವಾಗಿತ್ತು. ತೆಲುಗಿನ ಖ್ಯಾತ ತತ್ವಜ್ಞಾನಿ ಹಾಗೂ ಕವಿ ವೇಮನ ಚಿಂತನೆಗಳು ಅಮ್ಮನ ಮೇಲೆ ಪ್ರಭಾವ ಬೀರಿದ್ದವು. ವೇಮನ ಹುಟ್ಟಿನಿಂದ ರೆಡ್ಡಿ ಸಮುದಾಯಕ್ಕೆ ಸೇರಿದವನಾದರೂ ಸಮಾಜದ ಶೋಷಿತ ವರ್ಗದ ಪರವಾಗಿ ಧ್ವನಿ ಎತ್ತಿದಾತ.
ನನ್ನ ಪತ್ನಿಯ ಕುಟುಂಬದ ಹಿನ್ನೆಲೆ ತುಂಬಾನೇ ಜೋರಾಗಿದೆ. ರಾಜಕೀಯವಾಗಿ ಹೆಸರುವಾಸಿಯಾದವರು ಹಾಗೂ ಉನ್ನತ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದವರು ಇದ್ದಂತಹ ಮನೆತನ. ಮಾಜಿ ರಾಷ್ಟ್ರಪತಿಗಳಾದ ಶ್ರೀ ನೀಲಂ ಸಂಜೀವ ರೆಡ್ಡಿಯವರು ವರಸೆಯಲ್ಲಿ ನನ್ನ ಪತ್ನಿಗೆ ತಾತನಾಗುತ್ತಾರೆ. ಗ್ರಾಮೀಣ ಭಾಗದಿಂದ ಬಂದಿದ್ದರೂ ಕರ್ನೂಲ್ ಜಿಲ್ಲೆಯಲ್ಲಿ ಅತ್ಯಂತ ಗೌರವ ಕಾಪಾಡಿಕೊಂಡು ಬಂದ ಕುಟುಂಬ. ತೆಲುಗು ಆಕೆಯ ಮಾತೃಭಾಷೆ. ಆಕೆ ನನ್ನನ್ನು ವಿವಾಹವಾದ ದಿನದಿಂದ ಇಂದಿನ ತನಕ ಪ್ರತಿ ಹೆಜ್ಜೆಯಲ್ಲೂ ಸ್ಪೂರ್ತಿಯ ಚಿಲುಮೆಯಾಗಿರುವಾಕೆ. ನಮ್ಮನೆಗೆ ಸೊಸೆಯಾಗಿ ಬಂದ ಬಳಿಕ ಕನ್ನಡ ಮಾತನಾಡುವುದನ್ನು ಕಲಿತಳು. ಮನೆಯ ಜವಾಬ್ದಾರಿಯನ್ನು ತುಂಬಾನೇ ಅಚ್ಚುಕಟ್ಟಾಗಿ ನಿಭಾಯಿಸಿದಾಕೆ. ನನ್ನ ಪತ್ನಿಯ ಧೈರ್ಯ ಸ್ಥೈರ್ಯದ ಪರಿಚಯ ಹೊರ ಜಗತ್ತಿಗೆ ಆಗಿದ್ದು ನಾನು ಜೈಲಿಗೆ ಹೋದಂತಹ ಸಂದರ್ಭದಲ್ಲಿ ಎಂದರೆ ತಪ್ಪಾಗಲಾರದು. ನನ್ನ ವಿರೋಧಿಗಳೆಲ್ಲ ಸುಳ್ಳು ಆಪಾದನೆಗಳ ಸರಮಾಲೆ ಮಾಡಿ ಕೇಸ್ ಮೇಲೆ ಕೇಸ್ ಹಾಕುತ್ತಿದ್ದ ದಿನಗಳವು. ನನ್ನನ್ನು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮುಗಿಸಲು ದೊಡ್ಡ ಹುನ್ನಾರ ನಡೆದಿತ್ತು. ಆ ಸಂದರ್ಭದಲ್ಲಿ ನಮ್ಮ ಮಕ್ಕಳಿಗೆ ಧೈರ್ಯ ತುಂಬಿ, ನನ್ನ ಸಂಸ್ಥೆಯನ್ನು, ಕಾರ್ಮಿಕರನ್ನು ಕಾಪಾಡಿದ್ದು ಆಕೆಯೇ ಎಂದರೆ ಅತೀಶಯೋಕ್ತಿಯಲ್ಲ. ಚಿಕ್ಕಂದಿನಿಂದಲೂ ನಮ್ಮ ಮಕ್ಕಳು ಕಷ್ಟ ನೋಡದಂತೆ ಬೆಳೆಸಿದ್ದೆವು. ಈ ಮಧ್ಯೆ ನಾನು ಜೈಲು ಸೇರುವಾಗ ನನ್ನ ಮಗಳು ೧೦ ನೇ ತರಗತಿಯಲ್ಲಿದ್ದಳು. ಮಗನಿಗಿನ್ನು ಚಿಕ್ಕ ವಯಸ್ಸು. ಅಷ್ಟಾದರೂ ನನ್ನ ಪತ್ನಿ ತನ್ನ ನೋವನ್ನು ಅದುಮಿಟ್ಟುಕೊಂಡು ನನ್ನ ಅನುಪಸ್ಥಿತಿಯಲ್ಲಿ ಕುಟುಂಬ, ಉದ್ಯಮ ಸೇರಿದಂತೆ ಎಲ್ಲವನ್ನು ನಿಭಾಯಿಸಿದಳು. ಮಕ್ಕಳಿಗೆ ಕಷ್ಟ-ಸುಖವನ್ನು ಪರಿಚಯಿಸಿದಳು. ರಾಯಲ್ ಲೈಫ್ ಲೀಡ್ ಮಾಡುತ್ತಿದ್ದವರಿಗೆ ನಾರ್ಮಲ್ ಲೈಫ್ ಹೇಗಿರುತ್ತದೆ ಎಂಬುದನ್ನು ತಿಳಿಸಿಕೊಟ್ಟಳು. ಇದರ ಪರಿಣಾಮ ಅವರ ನನ್ನ ಅನುಪಸ್ಥಿತಿಯಲ್ಲೂ ಓದಿನಲ್ಲಿ ಹಿಂದೆ ಬೀಳಲಿಲ್ಲ. ಮಗಳು ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಪಡೆದಳು. ಮಗನು ಕೂಡ ಅತ್ಯುತ್ತಮ ಅಂಕಗಳೊಂದಿಗೆ ನಮಗೆ ಕೀರ್ತಿ ತಂದ. ಆಕೆಯ ಆತ್ಮವಿಶ್ವಾಸಕ್ಕೆ ನಾನು ಸದಾ ಅಭಿಮಾನಿ.
೨೦೦೪ ರಲ್ಲಿ ಶ್ರೀರಾಮುಲು ಶಾಸಕರಾದರು. ನಮ್ಮಣ್ಣ ಸೋಮಶೇಖರ ರೆಡ್ಡಿ ಮೇಯರ್ ಆದರು. ದೊಡ್ಡಣ್ಣ ಕರುಣಾಕರ ರೆಡ್ಡಿ ಲೋಕಸಭಾ ಸದಸ್ಯರಾಗಿದ್ದರು. ಈ ಮಧ್ಯೆ ಶ್ರೀರಾಮುಲು ಜನಪ್ರಿಯತೆ ಗಗನಮುಖಿಯಾಗಿತ್ತು. ಬಳ್ಳಾರಿಯಲ್ಲಿ ಪ್ರತಿ ವ್ಯಕ್ತಿ ಕೂಡ ಶ್ರೀರಾಮುಲು ಅವರನ್ನು ಪ್ರೀತಿಸಲು ಆರಂಭಿಸಿದರು. ನಮ್ಮ ತಾಯಿ ತೀರಿಕೊಂಡ ಸಂದರ್ಭದಲ್ಲಿ ಶ್ರೀರಾಮುಲು ತಮ್ಮ ತಾಯಿ ತೀರಿಕೊಂಡರು ಎಂದು ಹೇಳಿಕೆ ಕೊಟ್ಟಿದ್ದರು. ಜನರೆಲ್ಲ ಅವರ ಮನೆ ಮುಂದೆ ಸೇರಿದ್ದರು. ಶ್ರೀರಾಮುಲು ಅದ್ಯಾವ ಮಟ್ಟಿಗೆ ನಮ್ಮ ತಾಯಿಯನ್ನು ಗೌರವಿಸುತ್ತಿದ್ದರೆಂದರೆ ‘ನನ್ನ ತಾಯಿಯನ್ನು ತಮ್ಮ ತಾಯಿ’ ಅಂತ ಕರೆದದ್ದೇ ಸಾಕ್ಷಿ. ನನ್ನಮ್ಮ ಕೂಡ ಶ್ರೀರಾಮುಲು ಅವರನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡರು. ಶ್ರೀರಾಮುಲು ಎಲೆಕ್ಷನ್ನಲ್ಲಿ ಸೋತಾಗ ಸುಷ್ಮಾ ಸ್ವರಾಜ್ ಅವರು ನಮ್ಮ ಮನೆಗೆ ಬಂದಿದ್ದರು. ಆ ಸಂದರ್ಭದಲ್ಲಿ ನನ್ನ ಅಮ್ಮ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತರು. ಒಂದೆರಡು ಮೂರು ದಿನ ಆತ ಊರಿನಲ್ಲಿಲ್ಲವೆಂದರೆ ಅಮ್ಮನಿಗೆ ಬೇಸರವಾಗೋದು. ಆ ಮಟ್ಟಿನ ಮಾತೃ ವಾತ್ಸಲ್ಯ ಅಮ್ಮನಲ್ಲಿತ್ತು. ಅಮ್ಮನ ಧೈರ್ಯ, ಆತ್ಮವಿಶ್ವಾಸವೇ ನಮ್ಮ ಕುಟುಂಬದ ಶಕ್ತಿಯಾಗಿತ್ತು. ಆದರೆ ನಮ್ಮ ಬದುಕಿನ ಒಳ್ಳೆಯ ದಿನಗಳನ್ನು ನೋಡಲು ಅಮ್ಮ ಇರಲಿಲ್ಲ ಎಂಬ ಬೇಸರವಿದೆ. ಹೇಮರೆಡ್ಡಿ ಮಲ್ಲಮ್ಮನನ್ನು ನೆನೆಸಿಕೊಂಡೇ ಅಮ್ಮ ದಿನ ಆರಂಭಿಸುತ್ತಿದ್ದರು. ಅಡುಗೆ ಮಾಡುವ ಮೊದಲು ಒಲೆಯನ್ನು ತೊಳೆದು ಅದಕ್ಕೆ ವಿಭೂತಿ ಹಚ್ಚಿ ‘ಅನ್ನ ಎಂಬುದು ಅನ್ನಪೂರ್ಣೆ’ ಎಂದು ನಮಸ್ಕರಿಸಿಯೇ ಅಡುಗೆ ಆರಂಭಿಸುತ್ತಿದ್ದರು. ಇನ್ನು ಅಮ್ಮ ಕೊನೆಯ ದಿನಗಳ ತನಕವು ಅಡುಗೆ ಮಾಡಿ ಮನೆಗೆ ಬಂದವರಿಗೆ ಉಣಬಡಿಸುವುದರಲ್ಲಿ ಖುಷಿ ಪಡುತ್ತಿದ್ದರು. ನಮಗೆಷ್ಟೇ ಸ್ಥಿತಿವಂತಿಕೆ ಬಂದರೂ ಅಮ್ಮನೇ ಅಡುಗೆ ಮಾಡುತ್ತಿದ್ದರು. ಇನ್ನೊಬ್ಬರ ಹೊಟ್ಟೆ ಹಸಿವನ್ನು ತಣಿಸುವುದರಲ್ಲಿ ಅಮ್ಮನಿಗೆ ಸಾರ್ಥಕತೆ ಸಿಗುತ್ತಿತ್ತು. ಅಪ್ಪನ ಕೊನೆಯ ದಿನಗಳಲ್ಲಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಆದರೆ ಅಪ್ಪ ಸಾಯುವ ಸಂದರ್ಭದಲ್ಲಿ ಯಾರೊಬ್ಬರ ಹತ್ತಿರವು ಹಣದ ಋಣ ಉಳಿಸಿಕೊಂಡಿರಲಿಲ್ಲ. ನಮ್ಮ ತಂದೆ-ತಾಯಿ ಇಬ್ಬರದು ಸಹ ಹೆಂಗರುಳು. ಕಷ್ಟ ಎಂದು ಬಂದವರನ್ನು ಎಂದು ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ನಾವು ಮಾಡಿದ ದಾನ-ಧರ್ಮ ನಮ್ಮನ್ನು ಕಷ್ಟದಲ್ಲಿ ಕಾಯುತ್ತೆ ಎನ್ನುವ ನಂಬಿಕೆ ಅಪ್ಪ-ಅಮ್ಮನಲ್ಲಿತ್ತು. ಅದು ನನ್ನ ಅನುಭವಕ್ಕೂ ಬಂದಿದೆ.
ಹೆತ್ತವರ ಗುಣಗಳು ಮಕ್ಕಳಲ್ಲಿ ಕಂಡು ಬರುವುದು ಸಾಮಾನ್ಯ. ನನ್ನ ವಿಷಯದಲ್ಲಿ ಹೇಳುವುದಾದರೆ ಅಮ್ಮನಿಂದ ನನಗೆ ಸೂಪರ್ ಮೆಮೋರಿ ಪವರ್ ಬಂದಿದೆ, ಅಪ್ಪನಿಂದ ನನಗೆ ಧೈರ್ಯ ಬಂದಿದೆ ಎನಿಸುತ್ತದೆ. ಅಪ್ಪ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು ಒಟ್ಟಾರೆ ೩೫ ವರ್ಷ. ಅದರಲ್ಲಿ ೨ ವರ್ಷ ಮೈಸೂರು, ೯ ವರ್ಷ ಹೊಸಪೇಟೆ, ೧ ವರ್ಷ ಹರಪನಹಳ್ಳಿಯಲ್ಲಿ ಸೇವೆ ಸಲ್ಲಿಸಿದ್ದರು. ಬಳ್ಳಾರಿ ಜಿಲ್ಲೆಯಲ್ಲಿಯೇ ವೃತ್ತಿ ಜೀವನದ ಉಳಿದ ೨೩ ವರ್ಷ ಕಳೆದರು. ಹೀಗಾಗಿ ಪೊಲೀಸ್ ಚೆಂಗಾರೆಡ್ಡಿ ಎಂದರೆ ಬಳ್ಳಾರಿಯಲ್ಲಿ ಎಲ್ಲರಿಗೂ ಚಿರಪರಿಚಿತ. ಶ್ರೀರಾಮುಲು ೧೬-೧೭ ವರ್ಷದವನಾಗಿದ್ದಾಗಲೇ ನಾನು ಆತನಲ್ಲಿ ನಾಯಕತ್ವದ ಗುಣಗಳನ್ನು ಗುರುತಿಸಿದ್ದೆ. ದೇವರು ಮಾಡೋ ವಿಚಿತ್ರಗಳು ಹೇಗಿರುತ್ತೆ..? ಒಬ್ಬ ಸಾಮಾನ್ಯ ಮನುಷ್ಯ ಕೂಡ ಪ್ರಭಾವಶಾಲಿ ವ್ಯಕ್ತಿ ತಪುö್ಪ ದಾರಿ ತುಳಿದಾಗ ಆತನನ್ನು ಅಧಿಕಾರದಿಂದ ಕೆಳಗಿಳಿಸಬಹುದು ಎಂಬುದಕ್ಕೆ ನಮಗಾದ ಅನುಭವಗಳೇ ಸಾಕ್ಷಿ. ಆ ದಿನಗಳಲ್ಲಿ ನಮ್ಮದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬವಾಗಿತ್ತು. ಯಾವುದೇ ರಾಜಕೀಯ ಇತಿಹಾಸ ನಮಗಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ನಾವು ಜನಸೇವೆಯಲ್ಲಿ ತೊಡಗಿದ್ದು ಸಹ ದೈವೇಚ್ಛೆ ಎನಿಸುತ್ತದೆ.
೧೯೮೯ ರಲ್ಲಿ ನಾನು ಉದ್ಯಮ ಆರಂಭಿಸಿದೆ. ಒಂದು ಪಬ್ಲಿಕ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ನನ್ನ ಜ್ಞಾನಾರ್ಜನೆಯನ್ನೇ ಬಂಡವಾಳಗಿಟ್ಟುಕೊಂಡು ಪ್ರಮೋಟ್ ಮಾಡಲು ಆರಂಭಿಸಿದೆ. ಬಳ್ಳಾರಿಯನ್ನೇ ಹೆಡ್ ಆಫೀಸ್ ಆಗಿಟ್ಟುಕೊಂಡು ಕಾರ್ಯಾರಂಭ ಮಾಡಿದೆ. ಹಂತ ಹಂತವಾಗಿ ಸಂಸ್ಥೆಯನ್ನು ವಿಸ್ತರಿಸುತ್ತಾ ಹೋದೆ. ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿ ಒಟ್ಟಾರೆಯಾಗಿ ೧೨೫ ಬ್ರಾಂಚ್ಗಳನ್ನು ಆರಂಭಿಸಿದೆ. ಇದರಿಂದ ೪೦೦೦ ಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಯ್ತು. ೧೯೮೯ ರಿಂದ ೨೦೦೩ ರ ತನಕ ೧೪ ವರ್ಷಗಳ ಕಾಲ ನನ್ನ ಫೈನಾನ್ಸ್ ಕಂಪೆನಿಯನ್ನು ಯಶಸ್ವಿಯಾಗಿ ನಡೆಸಿದೆ. ಯಾವತ್ತಿಗೂ ನನ್ನ ಸಂಸ್ಥೆ ಆರ್ಬಿಐ ನಿಯಮಾವಳಿಗಳನ್ನು ಗಾಳಿಗೆ ತೂರಲಿಲ್ಲ. ಯಾರೊಬ್ಬರಿಗೂ ಮೋಸ ಮಾಡದೇ ಪ್ರಾಮಾಣಿಕವಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದೆ. ಈ ೧೪ ವರ್ಷದ ಅವಧಿಯಲ್ಲಿ ದೇಶದಲ್ಲಿ ಸಾವಿರಾರು ಫೈನಾನ್ಸ್ ಕಂಪೆನಿಗಳು ದಿವಾಳಿಯಾದವು. ಆರ್ಬಿಇ ನಿಯಾಮಾವಳಿಗಳನ್ನು ಗಾಳಿಗೆ ತೂರಿ ಗ್ರಾಹಕರನ್ನು ವಂಚಿಸಿದವು. ಆದರೆ ನಾನು ನನ್ನ ಸಂಸ್ಥೆಯ ಪ್ರತಿ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡೆ. ಆ ಬಗ್ಗೆ ಇಂದಿಗೂ ನನಗೆ ಹೆಮ್ಮೆಯಿದೆ. ನನ್ನ ಸಂಸ್ಥೆ ಬೆಳೆದಿದ್ದು ಜನಾಭಿಪ್ರಾಯದಿಂದಲೇ ಎಂದರೆ ತಪ್ಪಾಗಲಾರದು.
ಆ ಸಂದರ್ಭದಲ್ಲಿ ನಮ್ಮ ಕಂಪೆನಿಯ ಕೆಲಸ ಕಾರ್ಯಗಳಿಗಾಗಿಪ್ರಿಂಟಿಂಗ್ಗಾಗಿ ಹೆಚ್ಚು ಹಣ ವ್ಯಯಿಸಲಾಗುತ್ತಿತ್ತು. ಅದನ್ನು ನಿಯಂತ್ರಿಸುವನಿಟ್ಟಿನಲ್ಲಿ ನಾನೇ ಒಂದು ಪ್ರಿಂಟಿಂಗ್ ಪ್ರೆಸ್ ಆರಂಭಿಸಿದೆ. ಈ ನನ್ನ ಪ್ರಯತ್ನ ಬಹುದೊಡ್ಡ ಮಟ್ಟದ ವೆಚ್ಚವನ್ನು ತಗ್ಗಿಸಿತ್ತು. ನಂತರದ ದಿನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನುಳ್ಳ ಆಪ್ ಸೆಟ್ ಪ್ರಿಂಟಿಂಗ್ ಪ್ರೆಸ್ ಕೂಡ ಆರಂಭವಾಯ್ತು. ಈ ಮಧ್ಯೆ ‘ಈ ನಮ್ಮ ಕನ್ನಡ ನಾಡು’ ಎಂಬ ದಿನ ಪತ್ರಿಕೆಯನ್ನು ಆರಂಭಿಸಿದೆ. ಆ ಪತ್ರಿಕೆ ಇಂದಿಗೂ ಬಹುಬೇಡಿಕೆಯ ಹಾಗೂ ಜನಮೆಚ್ಚುಗೆಯ ದಿನಪತ್ರಿಕೆಯಾಗಿ ಗುರುತಿಸಿಕೊಂಡಿದೆ. ೧೯೯೪ ರಿಂದ ಇಂದಿನ ತನಕ ‘ಈ ನಮ್ಮ ಕನ್ನಡ ನಾಡು’ ಪತ್ರಿಕೆ ದಿನಂಪ್ರತಿ ಹೆಚ್ಚು ಪ್ರಸಾರಣವಾಗುತ್ತಲೇ ಬಂದಿದೆ. ಯಶಸ್ವಿಯಾಗಿ ೨೩ ವರ್ಷಗಳನ್ನು ಪೂರೈಸಿದೆ.
೧೯೮೯ ರಲ್ಲಿ ಸಾಮಾಜಿಕ ಸೇವೆ ಮಾಡುವ ಕನಸಿನೊಂದಿಗೆ ಎನೋಬಲ್ ಸಂಸ್ಥೆಯನ್ನು ಆರಂಭಿಸಿದೆ. ೧೯೯೨ ರಲ್ಲಿ ‘ವಿಶ್ವಭಾರತಿ ಕಲ್ಯಾಣ ಕೇಂದ್ರ’ ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು ಆರಂಭಿಸಿದೆ. ಇದು ‘ಎನೋಬಲ್ ಸಂಸ್ಥೆ’ಯ ಬೆಳವಣಿಗೆಗೆ ಪೂರಕವಾದ ಕೆಲಸ ಮಾಡುತ್ತಿತ್ತು. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ನಮ್ಮ ಸಂಸ್ಥೆಯ ನೌಕರರಲ್ಲಿದ್ದ ಪ್ರತಿಭೆಯನ್ನು ಪ್ರದರ್ಶಿಸಿಲು ಒಂದು ವೇದಿಕೆಯನ್ನು ಸೃಷ್ಟಿಸಿದೆ.
೧೯೯೭ ರಲ್ಲಿ ನಮ್ಮ ತಂದೆಯ ಹೆಸರಿನಲ್ಲಿ ಬುದ್ದಿಮಾಂದ್ಯ ಮಕ್ಕಳ ಶಾಲೆಯನ್ನು ಆರಂಭಿಸಿದೆ. ಇಂದಿಗೂ ಅಲ್ಲಿ ೧೧೦ ಕ್ಕೂ ಹೆಚ್ಚು ಬುದ್ದಿಮಾಂದ್ಯ ಮಕ್ಕಳ ಲಾಲನೆ-ಪೋಷಣೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಯಾವುದೇ ಬಡ ಕುಟುಂಬದಲ್ಲಿ ಗಂಡ-ಹೆAಡಿರಿಬ್ಬರು ಕೂಲಿ-ನಾಲಿ ಮಾಡಿದರೆ ಮಾತ್ರ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯ. ಇಂತಹ ಕುಟುಂಬಗಳಲ್ಲಿ ಬುದ್ದಿಮಾಂದ್ಯ ಮಕ್ಕಳು ಹುಟ್ಟಿದಾಗ ತಂದೆ-ತಾಯಿಯ ಕಷ್ಟ ದುಪ್ಪಟ್ಟಾಗುತ್ತದೆ. ಇಬ್ಬರಲ್ಲೊಬ್ಬರು ಮನೆಯಲ್ಲೇ ಉಳಿದು ಮಗುವನ್ನು ನೋಡಿಕೊಳ್ಳಬೇಕಾದ ಸಂದರ್ಭ ಸೃಷ್ಟಿಯಾಗುತ್ತದೆ. ಇದರಿಂದ ಅವರ ಅರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಅಂತಹ ಮಕ್ಕಳನ್ನು ನಮ್ಮ ಸಂಸ್ಥೆಗೆ ಕರೆತಂದು ನಮ್ಮ ಸ್ವಂತ ಮಕ್ಕಳಿಗಿಂತಲೂ ಹೆಚ್ಚಾಗಿ ನೋಡಿಕೊಳ್ಳುವ ಮಾನವೀಯ ಗುಣದ ಸಿಬ್ಬಂದಿಯಿದ್ದಾರೆ. ಈ ಸಂಸ್ಥೆಯ ಯೋಜನೆಯ ನಿಲಾನಕ್ಷೆಯನ್ನು ಅಮ್ಮನಿಗೆ ತೋರಿಸಿ, ಇದು ಭವಿಷ್ಯದಲ್ಲಿ ಹೇಗೆ ಕೆಲಸ ಮಾಡುತ್ತದೆಂಬುದನ್ನು ತಿಳಿಸಿದ್ದೆ. ೨೦೦೪ ರಲ್ಲಿ ನನ್ನ ತಾಯಿಯವರಿಂದಲೇ ಈ ಸಂಸ್ಥೆಯ ಶಂಕುಸ್ಥಾಪನಾ ಕಾರ್ಯ ಮಾಡಿಸಿದ್ದೆ. ಇದರ ಕಾರ್ಯ ಪೂರ್ಣವಾಗಿ ಕಾರ್ಯಾರಂಭವಾಗುವ ಹೊತ್ತಿಗಾಗಲೇ ಅಮ್ಮ ಇನ್ನಿಲ್ಲವಾಗಿದ್ದರು. ಆದರೆ ಅಮ್ಮನ ಆಶೀರ್ವಾದ ಇಂದಿಗೂ ನಮ್ಮ ಮೇಲಿದೆ. ಈ ಸಂಸ್ಥೆ ಶ್ರೀ ಎಲ್.ಕೆ ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಅವರಿಂದ ಉದ್ಘಾಟನೆಯಾಯ್ತು. ಇಂದು ನಮ್ಮ ಸಂಸ್ಥೆ ದೇವರ ಮಕ್ಕಳು ಎಂದೇ ಕರೆಯಲ್ಪಡುವ ವಿಕಲಚೇತನರು ಹಾಗೂ ಬುದ್ದಿಮಾಂದ್ಯರನ್ನು ಸಲಹುವ ಕೆಲಸ ಮಾಡುತ್ತಿದೆ. ಕೊಪ್ಪಳ, ಬಳ್ಳಾರಿ, ರಾಯಚೂರು ಸುತ್ತ ಮುತ್ತಲ ೫೦೦ಕ್ಕೂ ಹೆಚ್ಚು ಬುದ್ದಿಮಾಂದ್ಯ ಮಕ್ಕಳಿಗೆ ಇದರಿಂದ ಅನುಕೂಲವಾಗಿದೆ. ಆ ಎಲ್ಲಾ ಮಕ್ಕಳ ಪೋಷಕರ ಕಣ್ಣಲ್ಲಿ ಕಾಣುವ ಖುಷಿಗೆ ಬೆಲೆ ಕಟ್ಟಲಾಗದು. ಇದರೊಂದಿಗೆ ಅದೇ ಸ್ಥಳದಲ್ಲಿ ಒಂದು ಗೋಶಾಲೆ, ಕೃಷ್ಣ ಮಂದಿರ, ವೃದ್ಧಾಶ್ರಮ ಎಲ್ಲವು ಇದೆ. ಇದು ನನ್ನ ಬದುಕಿನಲ್ಲಿ ಸಾರ್ಥಕತೆಯನ್ನು ಕೊಟ್ಟ ಕೆಲಸಗಳಲ್ಲೊಂದು.
೧೯೯೦ ರ ಜನವರಿಯಲ್ಲಿ ನಮ್ಮ ತಂದೆ ತೀರಿಕೊಂಡರು. ಅದೇ ವರ್ಷ ನನ್ನ ಸ್ನೇಹಿತ ಶ್ರೀರಾಮುಲು ಅವರ ಸೋದರಮಾವನವರ ಹತ್ಯೆಯಾಯ್ತು. ಈ ಮಧ್ಯೆ ನಾನು ಹಂತ ಹಂತವಾಗಿ ಉದ್ಯಮಿಯಾಗಿ ಬೆಳೆದೆ. ಶ್ರೀ ರಾಮುಲು ರಾಜಕೀಯವಾಗಿ ಬೆಳೆದ. ೧೯೯೫ ರಲ್ಲಿ ಮೊದಲ ಬಾರಿಗೆ ನಗರ ಸಭೆ ಸದಸ್ಯರಾಗಿ ಆಯ್ಕೆಯಾದರು. ಇನ್ನೊಂದೆಡೆ ನನಗೆ ನಮ್ಮ ಬಳಿ ‘ಎನೋಬಲ್ ಸಂಸ್ಥೆ’ಗಾಗಿ ಸಾರ್ವಜನಿಕರಿಂದ ಶೇಖರಿಸಿದ ೨೦% ಹಣವಿತ್ತು. ಅದರಿಂದ ‘ಎನೋಬಲ್ ಏರ್ವೇಸ್’ ಎಂಬ ವಿಮಾನಯಾನ ಸಂಸ್ಥೆ ಆರಂಭಿಸುವ ಕನಸು ನನ್ನಲ್ಲಿತ್ತು. ಈ ಯೋಜನೆಯ ಪ್ರಸ್ತಾವನೆ ಸಲ್ಲಿಸಿದಾಗ ಇದಕ್ಕೆ ಬ್ಯಾಂಕ್ನಿAದ ಲೋನ್ ಕೂಡ ಲಭ್ಯವಾಯ್ತು. ಬಳ್ಳಾರಿಯಲ್ಲಿ ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾದ ಏರ್ಪೋರ್ಟ್ ಇತ್ತು. ಆ ಕಾಲದಲ್ಲಿ ಜೆಆರ್ಡಿ ಟಾಟಾ ಅವರು ಬಾಂಬೆಯಿAದ ಬಳ್ಳಾರಿಗೆ ವಿಮಾನದ ಮೂಲಕ ಬಂದು ತಂಗಿದ್ದರು ಎಂದು ಹೇಳಲಾಗುತ್ತದೆ. ಆಗ ನಾನು ೨೦ ಸೀಟರ್ ಕ್ಯಾಪಾಸಿಟಿಯುಳ್ಳ ಮೂರು ವಿಮಾನಗಳನ್ನು ಖರೀದಿಸಿದೆ. ಅದರ ರನ್ ವೇ ನಮಗೆ ೨೦ ಸೀಟರ್ ವಿಮಾನದ ಬಳಕೆಗೆ ಸಾಕಾಗಿತ್ತು. ಬಳ್ಳಾರಿಯಲ್ಲಿ ವಿಮಾನಯಾನ ಆರಂಭಿಸಬೇಕು ಎನ್ನುವ ಮಹತ್ತರ ಯೋಜನೆ ನನ್ನೊಳಗಿತ್ತು. ಆದರೆ ಆ ಸಂದರ್ಭದಲ್ಲಿ ನಮ್ಮ ಆತ್ಮೀಯರೊಬ್ಬರಿಂದ ಸಿಕ್ಕ ಸಲಹೆ ಸೂಚನೆ ನಾವು ಆ ಯೋಜನೆಯನ್ನು ಕೈ ಬಿಡುವಂತೆ ಮಾಡಿತು.
ಅನಂತರದ ದಿನಗಳಲ್ಲಿ ನಾವು ಓಬಳಾಪುರಂ ಮೈನಿಂಗ್ ಕಂಪೆನಿಯಲ್ಲಿ ಹೂಡಿಕೆ ಮಾಡುವ ಅವಕಾಶ ಸಿಕ್ಕಿತು. ನಮ್ಮೂರಿಗೆ ಹತ್ತಿರದಲ್ಲಿರುವ ಕಾರಣಕ್ಕೆ ಧೈರ್ಯ ಮಾಡಿ ಬಂಡವಾಳ ಹೂಡುವ ರಿಸ್ಕ್ ತೆಗೆದುಕೊಂಡೆ. ಏಕೆಂದರೆ ಗ್ರಾನೈಟ್ಗೆ ಇದ್ದ ವ್ಯಾಲ್ಯೂ ಕಬ್ಬಿಣದ ಅದಿರಿಗೆ ಇರಲಿಲ್ಲ. ಇದಲ್ಲದೆ ಕಬ್ಬಿಣದ ಅದಿರಿನ ಮೈನ್ ಎಂದರೆ ಕಿರಾಣಿ ಅಂಗಡಿಯವ ಕೂಡ ಸಾಲ ಕೊಡುತ್ತಿರಲಿಲ್ಲ. ಆಗ ಎಲ್ಲರೂ ಇದನ್ನು ಮಾಡಬೇಡಿ ಎಂದರೂ ನಾನು ಮತ್ತು ಶ್ರೀರಾಮುಲು ಭಂಡ ಧೈರ್ಯ ಮಾಡಿ ೨೦೦೦ ನೇ ಇಸವಿಯಲ್ಲಿ ಕೊಂಡುಕೊAಡೆವು. ೨೦೦೧ ರಲ್ಲಿ ನಮ್ಮ ಹೆಸರಿಗೆ ವರ್ಗಾವಣೆಯಾಯಿತು. ಆದರೆ ಅದಕ್ಕೆ ಅಗತ್ಯವಾದ ಒಪ್ಪಿಗೆಯನ್ನು ಕೇಂದ್ರದ ನಾನಾ ಇಲಾಖೆಗಳಿಂದ ಪಡೆದುಕೊಳ್ಳಲು ಮೂರು ವರ್ಷ ಕಾಯಬೇಕಾಯ್ತು. ೨೦೦೩ ರಲ್ಲಿ ನಾವು ಅಧಿಕೃತವಾಗಿ ರಫ್ತು ಆರಂಭಿಸಿದೆವು. ಎಂಎಂಟಿಸಿ ಮೂಲಕ ವಿದೇಶಕ್ಕೆ ಮೂರು ಶಿಪ್ಮೆಂಟ್ಗಳನ್ನು ಕಳುಹಿಸಿದೆವು. ಈ ಮಧ್ಯೆ ಆಗಿನ ಪ್ರಧಾನಿಗಳಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜೀಯವರು ತಂದ ಹೊಸ ರಫ್ತು ನೀತಿಯಿಂದ ನಾವು ಕೊಂಡ ಮಣ್ಣಿಗೆ ಚಿನ್ನದ ಬೆಲೆ ಬಂತು. ಅದೃಷ್ಟ ಚೆನ್ನಾಗಿದ್ದಾಗ ಮಣ್ಣು ಕೂಡ ಬಂಗಾರವಾಗುತ್ತೆ ಎಂಬ ಜನಜನಿತ ಮಾತು ನನ್ನ ವಿಷಯದಲ್ಲಿ ನಿಜವಾಯ್ತು. ಬಳ್ಳಾರಿಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಗುರಿ ನಮ್ಮಲ್ಲಿತ್ತು. ಬಳ್ಳಾರಿ ಬೀದಿ ದೀಪಗಳನ್ನೇ ಕಾಣದ ನಗರವಾಗಿತ್ತು. ಎಲ್ಲೋ ಒಂದೆರಡು ಪ್ರಮುಖ ರಸ್ತೆಗಳನ್ನು ಹೊರತು ಪಡಿಸಿದರೆ ಬೇರೆಲ್ಲೂ ಶ್ರೀಸಾಮಾನ್ಯರು ಓಡಾಡದಂತಹ ಪರಿಸ್ಥಿತಿಯಿತ್ತು. ಬೆಂಗಳೂರಿನ ನಂತರ ಅತಿ ಹೆಚ್ಚು ಸ್ಲಂ ಏರಿಯಾವನ್ನು ಹೊಂದಿದ್ದ ನಗರ ಎಂಬ ಕುಖ್ಯಾತಿಗೆ ಬಳ್ಳಾರಿ ಪಾತ್ರವಾಗಿತ್ತು. ಅಂಥ ಸಂದರ್ಭದಲ್ಲಿ ಶ್ರೀ ರಾಮುಲು ಅಭಿವೃದ್ಧಿಗೆ ಹೊಸ ಅರ್ಥ ಕೊಟ್ಟ. ಬಳ್ಳಾರಿಗೆ ಹೊಸ ರೂಪ ನೀಡಿದ. ಆತನಿಗೆ ಅವಶ್ಯವಾದ ಆರ್ಥಿಕ ಚೈತನ್ಯವನ್ನು, ಆತ್ಮಸ್ಟ್ರೈರ್ಯವನ್ನು ನಾನು ನೀಡುತ್ತಾ ಬಂದೆ. ಆರಂಭದ ದಿನಗಳಲ್ಲಿ ಶ್ರೀರಾಮುಲು ಬರಿಗಾಲಲ್ಲಿ ಪ್ರತಿ ಮನೆ ಮನೆಗೆ ತಿರುಗಿದ. ೧೯೯೯ ರಲ್ಲಿ ಶ್ರೀ ರಾಮುಲು ಚುನಾವಣೆಯಲ್ಲಿ ಸೋತಿದ್ದರು. ಆದರೂ ಜನರಿಂದ ದೂರ ಸರಿಯದೇ ಸತತವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದರು. ೨೦೦೧ ರಲ್ಲಿ ನಗರಸಭೆ ಎಲೆಕ್ಷನ್ನಲ್ಲಿ ಭರ್ಜರಿ ಬಹುಮತವುಳ್ಳ ಗೆಲುವು ಸಿಕ್ಕಿತು. ೨೦೦೪ ರ ವೇಳೆಗಾಗಲೇ ಆವು ನಮ್ಮ ಸ್ವಂತ ಹಣದಿಂದಲೇ ಬಳ್ಳಾರಿಯಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದೆವು. ಸ್ಲಂ ಜನರಿಗೆ ಹೆಚ್ಚೆಚ್ಚು ಸೌಲಭ್ಯಗಳನ್ನು ನೀಡುವ ಮೂಲಕ ಅವರ ಜೀವನಶೈಲಿಯ ಮಟ್ಟ ಬದಲಾಗುವಂತೆ ಮಾದಿದೆವು. ಇದರ ಪರಿಣಾಮ ಎಲ್ಲರೆದೆಯಲ್ಲೂ ಶ್ರೀರಾಮುಲು ಮನೆ ಮಾಡಿದರು. ಅದರ ಪರಿಣಾಮವಾಗಿ ೨೦೦೪ ರಲ್ಲಿ ಭರ್ಜರಿ ಬಹುಮತದೊಂದಿಗೆ ಶ್ರೀರಾಮುಲು ಶಾಸಕರಾಗಿ ಆಯ್ಕೆಯಾದರು. ೨೦೦೬ ಶ್ರೀರಾಮುಲು ಮಂತ್ರಿಯಾದರು. ೨೦೦೮ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂತು. ಬಳ್ಳಾರಿ ಜಿಲ್ಲೆಗೆ ಎಲ್ಲಾ ದಿಕ್ಕುಗಳಲ್ಲೂ ಅಭಿವೃದ್ಧಿ ಕಾಣುವ ಶಕ್ತಿಯಿದೆ. ಬಳ್ಳಾರಿಯಲ್ಲಿನ ಸಂಪನ್ಮೂಲ ಸಂಪದ್ಭರಿತವಾಗಿದೆ. ಬಳ್ಳಾರಿಯನ್ನು ಇಡೀ ಜಗತ್ತೇ ತಿರುಗಿ ನೋಡುವಂತಹ ಮಹಾನ್ ನಗರವಾಗಿಸುವ ಅವಶ್ಯಕತೆಯಿತ್ತು.
ಒಂದು ಸಾರಿ ಬಳ್ಳಾರಿಯಿಂದ ಬೆಂಗಳೂರಿಗೆ ಹೋಗಿ ಬರಲು ೧೩ ಗಂಟೆಗಳ ಪ್ರಯಾಣ ಅಗತ್ಯವಾಗಿತ್ತು. ಮತ್ತೆ ಅಲ್ಲಿಂದ ಬಳ್ಳಾರಿಗೆ ಮರಳಲು ಅಷ್ಟೇ ಸಮಯ ಹಿಡಿಯುತ್ತಿತ್ತು. ನಾನು ಪ್ರವಾಸೋದ್ಯಮ ಸಚಿವನಾಗಿದ್ದ ಸಂದರ್ಭದಲ್ಲಿ ದಿನಂಪ್ರತಿ ಬಳ್ಳಾರಿಯಿಂದ ಬೆಂಗಳೂರಿಗೆ, ಬೆಂಗಳೂರಿನಿAದ ಬಳ್ಳಾರಿಗೆ ಓಡಾಡಲೇಬೇಕಾದ ಅನಿವಾರ್ಯತೆಯಿತ್ತು. ನನ್ನ ಅಮೂಲ್ಯ ಸಮಯವನ್ನು ಜನಸೇವೆಗೆ ಮೀಸಲಿಡುವ ಕಾರಣದಿಂದ ನನ್ನ ಸ್ವಂತ ಹಣದಲ್ಲಿಯೇ ಒಂದು ಹೆಲಿಕಾಪ್ಟರ್ ಖರೀದಿಸಿದೆ. ಅದರ ನಿರ್ವಹಣೆಗಾಗಿ ತಗುಲುತ್ತಿದ್ದ ಎಲ್ಲಾ ವೆಚ್ಚವನ್ನು ನಾನೇ ಭರಿಸುತ್ತಿದ್ದೆ. ಕೇವಲ ಎರಡು ಗಂಟೆಗಳಲ್ಲೇ ಬೆಂಗಳೂರಿಗೆ ಬಂದು ವಿಧಾನಸೌಧದ ಸಚಿವಾಲಯದಲ್ಲಿನ ಕೆಲಸ ಕಾರ್ಯಗಳತ್ತ ಗಮನ ಹರಿಸುತ್ತಿದ್ದೆ. ಇನ್ನುಳಿದ ಸಮಯವನ್ನು ನಾನು ಜನಸೇವೆಗೆ ಮೀಸಲಿಡುತ್ತಿದ್ದೆ. ನಾನು ಹೆಲಿಕಾಪ್ಟರ್ ಖರೀದಿಸುವ ವೇಳೇಗಾಗಲೇ ನನ್ನ ತಾಯಿ ವಿಧಿವಶರಾಗಿದ್ದರು. ಅವರ ನೆನಪಿನಲ್ಲಿ ನಾನು ಕೊಂಡ ಹೆಲಿಕಾಪ್ಟರ್ಗೆ ರುಕ್ಮಿಣಿ ಎಂದೇ ಹೆಸರಿಟ್ಟೆ.
ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ವಿಶ್ವ ಕಂಡ ಧೀಮಂತ ನಾಯಕ. ಭಾರತ ದೇಶಕ್ಕೆ ತಮ್ಮ ಸಮರ್ಥ ಆಡಳಿತದಿಂದ ಹೊಸ ರೂಪ ನೀಡಿದವರು. ಜನರ ಆಶಯಗಳನ್ನು ಪೂರೈಸುತ್ತಲೇ ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದ ಜನಪ್ರಿಯ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆ ಶ್ರೀಮಾನ್ ಅಟಲ್ ಬಿಹಾರಿ ವಾಜಪೇಯಿಯವರಿಗೆ ಸಲ್ಲುತ್ತದೆ. ತಮ್ಮ ಸರಳತೆಯಿಂದಲೇ ಎಲ್ಲರ ಪ್ರೀತಿಗೆ ಪಾತ್ರವಾದರು. ಅಜಾತಶತ್ರು ಅಂತಲೇ ಅವರು ಜನಜನಿತರಾಗಿರುವುದೇ ಇದಕ್ಕೆ ನಿದರ್ಶನ. ೧೯೯೯ ರಲ್ಲಿ ಶ್ರೀಮತಿ ಸುಷ್ಮಾ ಸ್ವರಾಜ್ ಅವರು ಬಳ್ಳಾರಿ ಲೋಕಸಭೆಗೆ ಬಿಜೆಪಿಯ ಅಭ್ಯರ್ಥಿಯಾಗಿ ಸೋನಿಯಾ ಗಾಂಧಿಯವರ ವಿರುದ್ಧ ಕಣಕ್ಕಿಳಿದಿದ್ದರು. ಅದೇ ವೇಳೆ ಶ್ರೀರಾಮುಲು ಅವರು ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ವೇಳೆ ಪಕ್ಷದ ಪರವಾಗಿ ಪ್ರಚಾರ ಭಾಷಣ ಮಾಡಲು ನಮ್ಮ ಪ್ರಧಾನಿಗಳಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಬಳ್ಳಾರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ವಾಜಪೇಯಿಯವರಂಥ ಮಹಾನ್ ನಾಯಕರೊಡನೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಸೌಭಾಗ್ಯ ನಮ್ಮದಾಯ್ತು. ಅಟಲ್ ಜೀ ಅವರೊಡನೆ ಒಂದಷ್ಟು ಅಮೂಲ್ಯ ಸಮಯವನ್ನು ಕಳೆಯುವ ಸದಾವಕಾಶ ನನಗೆ ಸಿಕ್ಕಿತ್ತು. ಅವರೊಡನೆ ಕಳೆದ ಅಷ್ಟು ಸಮಯ ನನ್ನ ಪಾಲಿಗೆ ಅವಿಸ್ಮರಣೀಯ.
ಯಾವುದೇ ವ್ಯಕ್ತಿಯ ಬದುಕಿನಲ್ಲಿ ಸೋಲು-ಗೆಲುವು, ಕಷ್ಟ-ಸುಖಗಳೆರಡು ಸಮನಾಗಿ ಬಂದು ಹೋಗುತ್ತದೆ. ನನ್ನಬದುಕಿನ ಸಂಕಷ್ಟದ ದಿನಗಳು ಎದುರಾದಾಗ ನನ್ನ ವಿರೋಧಿಗಳು ಎಲ್ಲಾ ರೀತಿಯಲ್ಲಿಯೂ ನನ್ನನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರು. ಸುಳ್ಳುಗಳನ್ನೆ ನೂರು ಬಾರಿ ಹೇಳಿ ನನ್ನ ಗೌರವಕ್ಕೆ, ವ್ಯಕ್ತಿತ್ವಕ್ಕೆ ಕಪುö್ಪ ಮಸಿ ಬಳಿಯುವ ಪ್ರಯತ್ನ ಮಾಡಿದವು. ಕೆಲವು ಮಾಧ್ಯಮಗಳು ಸಹ ಅತ್ಯಂತ ಕೆಳಹಂತಕ್ಕೆ ಇಳಿದು ನನ್ನನ್ನು ನಿಂದಿಸಿದವು. ಸತ್ಯವನ್ನು ಮರೆಮಾಚಿ ಸುಳ್ಳಿನ ಸರಮಾಲೆಯನ್ನೇ ಪ್ರಕಟಿಸಿದವು. ಇಷ್ಟಾಗಿಯೂ ಕೊನೆಗೆ ಗೆದ್ದದ್ದು ಸತ್ಯವೇ. ನ್ಯಾಯಕ್ಕೆ ಅಂತಿಮವಾದ ಗೆಲುವು ಸಿಕ್ಕಿದೆ, ಇಂದು ನನ್ನ ಮೇಲಿದ್ದ ಶೇಕಡಾ ೯೦% ಕೇಸುಗಳು ಮುಕ್ತಾಯವಾಗಿದ್ದು, ನಾನು ನಿರ್ದೋಷಿ ಎಂಬ ತೀರ್ಪು ಹೊರ ಬಿದ್ದಿದೆ. ಸತ್ಯಕ್ಕಿರುವ ಶಕ್ತಿಯೇ ಅಂಥದ್ದು. ಅದು ಎಲ್ಲವನ್ನು ಮೆಟ್ಟಿ ನಿಲ್ಲುತ್ತದೆ. ಎಲ್ಲ ಸವಾಲನ್ನು ಮೀರಿ ಗೆಲ್ಲುತ್ತದೆ. ಮುಂಬರುವ ದಿನಗಳಲ್ಲಿ ನಾನು ಜನತೆಗೆ ಸತ್ಯ ದರ್ಶನ ಮಾಡಿಸಲಿದ್ದೇನೆ. ಅಲ್ಲದೇ ಸಾಕ್ಷಿಸಹಿತವಾಗಿ ವಿರೋಧಿಗಳ ಎಲ್ಲಾ ಆರೋಪಗಳಿಗೆ ಸಮರ್ಥ ಉತ್ತರವನ್ನು ಸಾರ್ವಜನಿಕರ ಸಮ್ಮುಖದಲ್ಲಿಯೇ ನೀಡಲಿದ್ದೇನೆ.
ನಾನು ಸಿನಿಮಾ ನೋಡುವ ಸಲುವಾಗಿ ಅನೇಕ ಬಾರಿ ಚಿತ್ರಮಂದಿರಕ್ಕೆ ತೆರಳಿದಾಗ ಒಂದು ವಿಚಾರ ನನ್ನನ್ನು ಬಹುಆಗಿ ಬಾಧಿಸುತ್ತದೆ. ಚಿತ್ರ ಪ್ರದರ್ಶನ ಆರಂಭವಾಗುವ ಮೊದಲು ಕಡ್ಡಾಯವಾಗಿ ರಾಷ್ಟ್ರಗೀತೆ ಪ್ರಸಾರ ಮಾಡಬೇಕು ಎಂಬ ನಿಯಮವಿದೆ. ಚಿತ್ರಮಂದಿರಗಳು ನಿಯಮಾನುಸಾರವಾಗಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಿದರೂ ಪ್ರತಿಯೊಬ್ಬರು ಆ ನಿಯಮವನ್ನು ಪಾಲಿಸುತ್ತಿಲ್ಲ. ಕೆಲವು ನಾಗರೀಕರು ಒಂದು ನಿಮಿಷ ಕಾಲ ಎದ್ದು ನಿಂತು ನಮಗೆ ನೆಲ, ಜಲ, ಬದುಕು ಕೊಟ್ಟ ದೇಶಕ್ಕೆ ಗೌರವ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ನಮ್ಮ ದೇಶವನ್ನು, ಭಾಷೆಯನ್ನು, ಸಂಸ್ಕೃತಿಯನ್ನು, ಕಾನೂನನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಅರಿವು ಮೂಡಿಸಲೆಂದೇ ರಾಷ್ಟ್ರಗೀತೆಯನ್ನು ಹಾಡುವುದನ್ನು ಚಿತ್ರೀಕರಿಸಲಾದ ವಿಶೇಷ ವಿಡಿಯೋವನ್ನು ಮಾಡಿದ್ದೇವೆ. ಇದಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಶ್ರೀಕೃಷ್ಣದೇವರಾಯರಿಗೆ ‘ಕರ್ನಾಟ್ ಆಂಧ್ರ ಮಹಾಪ್ರಭು’ ಎಂಬ ಬಿರುದಿತ್ತು. ವಿಜಯನಗರದ ಮಹಾರಾಜ ಶ್ರೀಕೃಷ್ಣದೇವರಾಯ ಅವರಿಗೆ ಕನ್ನಡ ಮತ್ತು ತೆಲುಗು ಭಾಷೆಗಳೆರಡಲ್ಲೂ ಹಿಡಿತವಿತ್ತು. ಹಾಗಾಗಿ ನಮ್ಮ ಅವಧಿಯಲ್ಲಿ ‘ಹಂಪಿ ಉತ್ಸವ’ವನ್ನು ಅದ್ಧೂರಿಯಾಗಿ ಆಯೋಜಿಸಿಲ್ಲದೇ ಅದೊಂದು ಭಾಷೆ-ಭಾಷೆಗಳನ್ನು ಬೆಸೆಯುವ ವೇದಿಕೆಯನ್ನಾಗಿಸಿದ ಖುಷಿಯಿದೆ.
ನಾನು ಸಚಿವನಾಗಬಹುದು ಎಂದು ಕನಸು ಕಂಡವನಲ್ಲ. ನಾನು ಸಚಿವನಾಗಿದ್ದು ಸಹ ಅನಿರೀಕ್ಷಿತ ಸಂದರ್ಭದಲ್ಲಿ ಎಂಬ ಸಂಗತಿ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಇನ್ನು ವಿಶೇಷ ಸಂಗತಿಯೆAದರೆ ನಾನು ಸಚಿವನಾಗುತ್ತಿದ್ದೇನೆ ಎಂಬ ಸಂಗತಿ ನಾನು ಪ್ರಮಾಣ ವಚನ ಸ್ವೀಕರಿಸಿದ ಹಿಂದಿನ ರಾತ್ರಿಯಷ್ಟೇ ತಿಳಿಯಿತು. ನಾಳೆ ಪ್ರಮಾಣ ವಚನ ಎಂದಾಗ ಹಿಂದಿನ ರಾತ್ರಿ ಅದು ಸಹ ಮಧ್ಯರಾತ್ರಿ ಸರಿ ಸುಮಾರು ೨.೩೦ ರ ಹೊತ್ತಿಗೆ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡ್ಯೂರಪ್ಪನವರು ಕರೆ ಮಾಡಿ ನಿಮ್ಮನ್ನು ಸಹ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದೇವೆ. ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿರಿ ಎಂದರು. ಆಗ ನಾನು ನನ್ನಣ್ಣ ಮತ್ತು ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ಸಿಕ್ಕರೆ ಸಾಕು ಎಂದೆ. ನೀವು ಸಮರ್ಥರೆಂದೇ ನಾನು ಸಂಪುಟಕ್ಕೆ ಕರೆದುಕೊಂಡಿದ್ದೇನೆ. ನೀವು ನಾಳೆ ಪ್ರಮಾಣವಚನ ಸಮಾರಂಭಕ್ಕೆ ಸಿದ್ಧರಾಗಿ ಬನ್ನಿ ಎಂದು ಹೇಳಿದರು. ಇದು ಅನಿರೀಕ್ಷಿತವಾಗಿದ್ದ ಕಾರಣ ನಾನು ಸೂಟಿನಲ್ಲಿಯೇ ಬಂದು ಪ್ರಮಾಣ ಸ್ವೀಕರಿಸಿದ್ದೆ. ಅಂದಿನ ತನಕ ನಾನೆಂದು ರಾಜಕಾರಣಿಗಳಂತೆ ವೈಟ್ ಅಂಡ್ ವೈಟ್ ಧರಿಸಿರಲಿಲ್ಲ. ಮಧ್ಯರಾತ್ರಿಯಲ್ಲಿ ಅಂಥದ್ದೊAದು ಸಿಹಿ ಸುದ್ದಿ ಸಿಕ್ಕ ಕಾರಣ ನನಗೆ ವಿಶೇಷ ಪೋಷಾಕನ್ನು ಕೊಳ್ಳಲು ಸಹ ಸಾಧ್ಯವಾಗಲಿಲ್ಲ. ಹೀಗೆ ಸಚಿವ ಸ್ಥಾನ ಎಂಬುದು ನಾನು ಬಯಸದೇ ಬಂದ ಭಾಗ್ಯವಾಗಿತ್ತು. ಈಗ ನನಗೆ ಅನ್ನಿಸುತ್ತೆ.. ಒಂದು ವೇಳೆ ನಾನು ರಾಜಕೀಯಕ್ಕೆ ಬರದೇ ಉದ್ಯಮಿಯಾಗಿಯೇ ಉಳಿದಿದ್ದರೆ ಒಂದು ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸೃಷ್ಟಿಸುತ್ತಿದ್ದೆ.ಡ ಹೆಸರು, ಊರು ಗಮನಿಸಿದ ಕೂಡಲೇ ಅವರು ಈ ಕಾರಣಕ್ಕೆ ಕರೆ ಮಾಡಿದ್ದರು, ಅವರ ಸಮಸ್ಯೆ ಹೀಗೀಗಿದೆ ಎಂದು ಕರಾರುವಕ್ಕಾಗಿ ಹೇಳಿ ಬಿಡುತ್ತಿದ್ದರು. ಅಮ್ಮನ ನೆನಪಿನ ಶಕ್ತಿಯ ಅಗಾಧತೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿತ್ತು. ಇದರ ಜೊತೆಗೆ ಮನೆಗೆ ಯಾರೇ ಬಂದರೂ ಬರೀ ಕಾಫಿ ಟೀ ಕೊಟ್ಟು ಸುಮ್ಮನಾಗುತ್ತಿರಲಿಲ್ಲ. ಬಂದವರ ಹಸಿವು ತಣಿಸಿಯೇ ಕಳಿಸಬೇಕೆನ್ನುವ ಗುಣ ಅಮ್ಮನದು. ೧೯೯೯ ರಲ್ಲಿ ಸುಷ್ಮಾ ಸ್ವರಾಜ್ ಬಳ್ಳಾರಿಯಲ್ಲಿ ನಿಂತು ಸೋತ ಬಳಿಕವು ನಮ್ಮ ಅಮ್ಮ ಕಾರ್ಯಕರ್ತರನ್ನು ಮೊದಲಿಗಿಂತಲೂ ಹೆಚ್ಚು ಆತ್ಮೀಯತೆಯಿಂದ ನೋಡಿಕೊಂಡರು. ಬಳ್ಳಾರಿ ನಗರದಲ್ಲಿ ಹಳೇ ರಾಜಕಾರಣಿಗಳು ಯಾವ ರೀತಿಯ ಸಾರ್ವಭೌಮತ್ವ ಸೃಷ್ಟಿಸಿಕೊಂಡಿದ್ದರೆಂದರೆ ಶ್ರೀಸಾಮಾನ್ಯರು ಆ ರಾಜಕಾರಣಿಗಳ ಮನೆ ಮುಂದೆ ನಡೆಯುವಾಗ ತಮ್ಮ ಕಾಲಿನಲ್ಲಿರುವ ಚಪ್ಪಲಿ ತೆಗೆದು ಅದನ್ನು ಬಗಲಿಟ್ಟುಕೊಂಡು ತಲೆ ತಗ್ಗಿಸಿ ನಡೆಯಬೇಕಿತ್ತು. ಇಂಥದ್ದೊಂದು ಅನಿಷ್ಠ ಪದ್ದತಿ ಆ ದಿನಗಳಲ್ಲಿತ್ತು.
ಅಮ್ಮ ಹುಟ್ಟಿ ಬೆಳೆದದ್ದೆಲ್ಲಾ ಆಂಧ್ರದಲ್ಲಿ. ಅವರು ಮದುವೆಯಾಗಿದ್ದು ಕೂಡ ೧೫ನೇ ವರ್ಷಕ್ಕೆ.. ಹೀಗಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಂಸಾರದ ಜವಾಬ್ದಾರಿ ಅಮ್ಮನ ಹೆಗಲೇರಿತು. ನಮ್ಮ ತಾಯಿಯ ಕುಟುಂಬದವರು ಧೀರು ಬ್ರಹ್ಮೆಂದ್ರ ಸ್ವಾಮಿಗಳ ತತ್ವವನ್ನು ಪಾಲಿಸಿಕೊಂಡು ಬಂದಿದ್ದರು. ಧೀರು ಬ್ರಹ್ಮೆಂದ್ರ ಸ್ವಾಮಿಗಳು ಜಾತ್ಯಾತೀತವಾಗಿ ಬದುಕಬೇಕು ಎಂಬ ಸಂದೇಶ ಸಾರಿದವರು. ಜಾತಿಗಿಂತ ನೀತಿ ಮುಖ್ಯ ಎಂಬ ಸಂದೇಶವನ್ನು ನಮ್ಮ ತಾಯಿ ಕೂಡ ನಂಬಿದ್ದರು. ಹೀಗಾಗಿ ಶ್ರೀರಾಮುಲು ಅವರನ್ನು ಸಹ ನನ್ನ ಅಮ್ಮ ಸ್ವಂತ ಮಗನಂತೆಯೇ ನೋಡಿಕೊಂಡರು. ಅಮ್ಮ ಸಾಯುವ ಕೆಲ ತಿಂಗಳ ಮೊದಲು ನನ್ನ ಅಂತಿಮ ಸಂಸ್ಕಾರ ಮಾಡುವಾಗ ನಿನ್ನೊಂದಿಗೆ ಶ್ರೀರಾಮುಲು ಕೂಡ ನನ್ನ ಚಿತೆಗೆ ಅಗ್ನಿಸ್ಪರ್ಶ ಮಾಡಬೇಕೆಂದು ಕೇಳಿಕೊಂಡಿದ್ದರು. ಶ್ರೀರಾಮುಲು ಅವರಿಗೆ ಬಳ್ಳಾರಿಯಲ್ಲಿ ಸಾಕಷ್ಟು ವಿರೋಧಿಗಳಿದ್ದರು. ಒಂದು ಹಂತದಲ್ಲಿ ಶ್ರೀರಾಮುಲು ಅವರ ಜೀವಕ್ಕೂ ಅಪಾಯವಿದ್ದಂತಹ ದಿನಗಳಿದ್ದವು. ಈ ಮಧ್ಯೆ ನನ್ನ ಮತ್ತು ಶ್ರೀರಾಮುಲು ಸ್ನೇಹ ಒಂದೇ ಜೀವ ಎರಡು ದೇಹ ಎನ್ನುವಂತಿತ್ತು. ಶ್ರೀರಾಮುಲು ವೈರಿಗಳು ನಮ್ಮ ತಾಯಿಗೆ ಬೆದರಿಕೆ ಕರೆ ಮಾಡಿ “ನಿಮ್ಮ ಮಕ್ಕಳಿಗೆ ಆ ಶ್ರೀರಾಮುಲು ಸಹವಾಸ ಬಿಡಲು ಹೇಳಿ, ಇಲ್ಲದಿದ್ದರೆ ಅನಾಹುತ ಗ್ಯಾರಂಟಿ” ಎಂದು ಧಮಕಿ ಹಾಕುತ್ತಿದ್ದರು. ಇಷ್ಟಾದರೂ ಅಮ್ಮ ಎಂದಿಗೂ ಎದೆಗುಂದಲಿಲ್ಲ. “ಹುಟ್ಟೋದು ಒಂದ್ಸಲ, ಸಾಯೋದು ಒಂದ್ಸಲ.. ಅದೇನು ಮಾಡ್ತಿರೋ ಮಾಡಿ. ಶ್ರೀರಾಮುಲುನನ್ನು ನಮ್ಮ ಕುಟುಂಬ ದೂರ ಇಡುವ ಪ್ರಶ್ನೆಯೇ ಇಲ್ಲ” ಎಂದು ಸಾರ್ವಜನಿಕ ಹೇಳಿದ್ದು ನನ್ನಮ್ಮನ ಗಟ್ಟಿತನಕ್ಕೆ ಸಾಕ್ಷಿ. ‘ನಮ್ಮಿಬ್ಬರ ಸ್ನೇಹ ಚಿರಕಾಲ ಹೀಗೆ ಇರಬೇಕು’ ಎಂಬುದು ನನ್ನ ಅಮ್ಮನ ಆಶಯವಾಗಿತ್ತು. ತೆಲುಗಿನ ಖ್ಯಾತ ತತ್ವಜ್ಞಾನಿ ಹಾಗೂ ಕವಿ ವೇಮನ ಚಿಂತನೆಗಳು ಅಮ್ಮನ ಮೇಲೆ ಪ್ರಭಾವ ಬೀರಿದ್ದವು. ವೇಮನ ಹುಟ್ಟಿನಿಂದ ರೆಡ್ಡಿ ಸಮುದಾಯಕ್ಕೆ ಸೇರಿದವನಾದರೂ ಸಮಾಜದ ಶೋಷಿತ ವರ್ಗದ ಪರವಾಗಿ ಧ್ವನಿ ಎತ್ತಿದಾತ.
Copyright © 2024 Gali Janardhana Reddy - All Rights Reserved.
Powered by GoDaddy